ಬೆಂಗಳೂರು: ಕರಾವಳಿ ಮತ್ತು ರಾಜಧಾನಿ ಬೆಂಗಳೂರಿನ ನಡುವಿನ ರೈಲು ಪ್ರಯಾಣ ಮತ್ತಷ್ಟು ವೇಗ ಪಡೆದುಕೊಳ್ಳಲಿದ್ದು, ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಜೂನ್ 3ರಿಂದ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ . ಸೋಮಣ್ಣ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಕಲೇಶಪುರ–ಕುಕ್ಕೆ ಸುಬ್ರಹ್ಮಣ್ಯ ನಡುವಿನ 55 ಕಿ.ಮೀ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ವಂದೇ ಭಾರತ್ ರೈಲು ಸಂಚಾರಕ್ಕೆ ದಾರಿ ಸುಗಮವಾಗಿದೆ ಎಂದು ಹೇಳಿದರು.
ಜೂನ್ 3ರಿಂದ ರೈಲಿನ ಪ್ರಾಯೋಗಿಕ ಓಟ ಆರಂಭವಾಗಲಿದ್ದು, ಮುಂದಿನ 15 ರಿಂದ 20 ದಿನಗಳೊಳಗೆ ಬೆಂಗಳೂರು–ಮಂಗಳೂರು ನಡುವೆ ಪೂರ್ಣ ಪ್ರಮಾಣದ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೂಚನೆ ನೀಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಪ್ರಸ್ತುತ ಕರ್ನಾಟಕದ 14 ಜಿಲ್ಲೆಗಳಲ್ಲಿ 12 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಬೆಂಗಳೂರು–ಮಂಗಳೂರು ಮಾರ್ಗದ 13ನೇ ವಂದೇ ಭಾರತ್ ರೈಲು ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಎಂದರು.
ಇದೇ ವೇಳೆ ರಾಜ್ಯದ ರೈಲ್ವೆ ಅಭಿವೃದ್ಧಿ, ಅಮೃತ್ ಭಾರತ್ ರೈಲುಗಳು, ಮೆಮೋ ರೈಲು ಸೇವೆಗಳು, ರೈಲ್ವೆ ನಿಲ್ದಾಣಗಳ ಆಧುನೀಕರಣ ಹಾಗೂ ಲೆವೆಲ್ ಕ್ರಾಸಿಂಗ್ ತೆರವು ಕಾಮಗಾರಿಗಳ ಕುರಿತು ಸಚಿವರು ವಿವರ ನೀಡಿದರು. ರಾಜ್ಯಕ್ಕೆ 2026–27ನೇ ಸಾಲಿನಲ್ಲಿ ₹7,748 ಕೋಟಿ ರೈಲ್ವೆ ಅನುದಾನ ಮಂಜೂರಾಗಿರುವುದಾಗಿ ಅವರು ತಿಳಿಸಿದರು.







