ಪಡುಬಿದ್ರಿ : ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಬ್ಯಾಂಕ್ಗೆ ಅಡವಿಟ್ಟು ₹3.49 ಲಕ್ಷ ಸಾಲ ಪಡೆದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ್ ಕುಮಾರ್ (31) ಅವರು Axis Bank ನ ಪಡುಬಿದ್ರಿ ಶಾಖೆಯ ಶಾಖಾ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಪಿತ ರಾಜೀವ್ ಕಲಾಯತಿನಲ್ಕುಜಿಯಿಲ್ ಕುಟ್ಟಪ್ಪನ್ ಎಂಬಾತನು 21/09/2022 ರಂದು LNAPG ಯೋಜನೆಯಡಿ ಜುವೆಲ್ ಲೋನ್ ಖಾತೆಯಲ್ಲಿ 103.750 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಡವಿಟ್ಟು ₹3,49,000 ಸಾಲ ಪಡೆದಿದ್ದನು ಎನ್ನಲಾಗಿದೆ.
ಆರೋಪಿತನು ಬೇರೆ ಬ್ಯಾಂಕ್ಗಳಲ್ಲಿಯೂ ನಕಲಿ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿರುವ ಕುರಿತು ಪ್ರಕರಣಗಳು ದಾಖಲಾಗಿರುವ ಹಿನ್ನಲೆಯಲ್ಲಿ ಸಂಶಯಗೊಂಡ ಬ್ಯಾಂಕ್ ಅಧಿಕಾರಿಗಳು, ಆತ ಅಡವಿಟ್ಟಿದ್ದ ಚಿನ್ನಾಭರಣಗಳ ಮರು ಪರಿಶೀಲನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೆಜರ್ಸ್ ಸುಮೇರು ಗ್ಲೋಬಲ್ ಸಪೋರ್ಟ್ ಸೊಲುಷನ್ ಪ್ರೈವೇಟ್ ಲಿಮಿಟೆಡ್ನ ಎಂಪನೇಲ್ಡ್ ಪರೀಕ್ಷಕರಿಂದ 03/12/2025 ರಂದು ಪರಿಶೀಲನೆ ನಡೆಸಲಾಗಿದ್ದು, ನೀಡಿದ ವರದಿಯಲ್ಲಿ ಆಭರಣಗಳು ನಕಲಿ ಎಂದು ಪತ್ತೆಯಾಗಿದೆ.
ಆರೋಪಿತನು ನಕಲಿ ಬಂಗಾರದ ಒಡವೆಗಳನ್ನು ಅಸಲಿ ಎಂದು ನಂಬಿಸಿ ಸಾರ್ವಜನಿಕರ ಠೇವಣಿಯಿಂದ ನಡೆಸಲ್ಪಡುವ ಬ್ಯಾಂಕ್ಗೆ ಮೋಸ ಮಾಡಿ ಸಾಲ ಪಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ Axis Bank ಮೇಲಾಧಿಕಾರಿಗಳ ಅನುಮತಿ ಪಡೆದು ಮರು ಮೌಲ್ಯಮಾಪನ ವರದಿ ಸಂಗ್ರಹಿಸಿ ದೂರು ದಾಖಲಿಸಲಾಗಿದೆ.
ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






