ಮಣಿಪಾಲ: ಇಂದ್ರಾಳಿ ರೈಲ್ವೆ ಸ್ಟೇಷನ್ ಸಮೀಪ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ದಿನಾಂಕ 21/05/2026 ರಂದು ಠಾಣೆಯ ಎಎಸ್ಐ ವಿವೇಕಾನಂದ ಹಾಗೂ ಹೆಡ್ ಕಾನ್ಸ್ಟೇಬಲ್ ಚೇತನ್ ಅವರು ಹಗಲು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಷನ್ ಬಳಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ. ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡ ತಕ್ಷಣ ವ್ಯಕ್ತಿಯೊಬ್ಬ ತನ್ನ ಇರುವಿಕೆಯನ್ನು ಮರೆಮಾಚಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಪೊಲೀಸರು ಅವರನ್ನು ಹಿಡಿದು ವಿಚಾರಿಸಿದಾಗ, ತಮ್ಮನ್ನು ರಮೇಶ ಬಂಡಿ ವಡ್ಡರ (45) ಹಾಗೂ ಪತ್ನಿ ಸುಧಾ (30), ಬಾದಾಮಿ ತಾಲೂಕಿನ ಕೆರೂರು ಚಿನ್ನುಗುಂಡಿ ಓಟಿ ನಿವಾಸಿಗಳೆಂದು ಪರಿಚಯಿಸಿಕೊಂಡಿದ್ದಾರೆ.
ಪರಿಶೀಲನೆ ವೇಳೆ ರಮೇಶನ ಬಳಿ Samsung Galaxy A16 5G ಹಾಗೂ Oppo A53 5G ಮೊಬೈಲ್ಗಳು, ಒಂದು ಸಿಮ್ ಕಾರ್ಡ್ ಇದ್ದು, ಸುಧಾ ಅವರ ಬಳಿ Ace Itel ಮೊಬೈಲ್ ಪತ್ತೆಯಾಗಿದೆ. ಮೊಬೈಲ್ಗಳು ಹಾಗೂ ತಮ್ಮ ಇರುವಿಕೆಯ ಬಗ್ಗೆ ಸಮರ್ಪಕ ಮಾಹಿತಿ ನೀಡದೇ ಇದ್ದ ಹಿನ್ನೆಲೆಯಲ್ಲಿ ಅವರು ಯಾವುದೋ ಬೇವಾರಂಟ್ ಅಥವಾ ತಕ್ಷೀರು ನಡೆಸಲು ಸಂಚರಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ವಶಕ್ಕೆ ಪಡೆದು ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.






