ಕಾರ್ಕಳ: ಮೇ 20: ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ ಶಾಂಭವಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದ ಪ್ರಕರಣವನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದು, ಸುಮಾರು 40 ಸಾವಿರ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಮೇ 19ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ M.S. ಅವರು ಠಾಣೆಯಲ್ಲಿದ್ದ ವೇಳೆ, ಠಾಣಾ ವ್ಯಾಪ್ತಿಯ ಬೋಳ ಗ್ರಾಮದ ಇಚ್ಚೋಡಿ ಪ್ರದೇಶದಲ್ಲಿ ಹರಿಯುವ ಶಾಂಭವಿ ನದಿಯಿಂದ ಕೆಲವು ವ್ಯಕ್ತಿಗಳು ಹಿಟಾಚಿ/ಜೆಸಿಬಿ ಅಥವಾ ಇತರ ಯಂತ್ರೋಪಕರಣಗಳ ಮೂಲಕ ಅಕ್ರಮವಾಗಿ ಮರಳು ತೆಗೆಯುತ್ತಿದ್ದು, ಕಳವು ಮಾಡಿದ ಮರಳನ್ನು ನದಿಯ ಮಧ್ಯಭಾಗದಲ್ಲಿ ರಾಶಿ ಹಾಕಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.
ಮಾಹಿತಿ ಆಧರಿಸಿ ಪಿಎಸ್ಐ ಪ್ರಸನ್ನ M.S. ಅವರು ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 12:00 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿತರು ಸಂಘಟಿತರಾಗಿ ಶಾಂಭವಿ ನದಿಯಿಂದ ಮರಳನ್ನು ಕಳವು ಮಾಡಿ ನದಿಯ ಮಧ್ಯದಲ್ಲಿ ಶೇಖರಿಸಿಟ್ಟಿದ್ದ ಅಂದಾಜು 5 ಲೋಡ್ (10 ಯುನಿಟ್) ಮರಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮರಳಿನ ಮೌಲ್ಯ ಸುಮಾರು 40,000 ರೂ. ಎಂದು ಅಂದಾಜಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







