ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಗೌರವ ಪ್ರಸ್ತಿ, ಯಕ್ಷಸಿರಿ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಅಂಬಲಪಾಡಿಯ ದೇವಳದ ಭವಾನಿ ಮಂಟಪದಲ್ಲಿ ಭಾನುವಾರ ಸಂಪನ್ನಗೊoಡಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಶೋಧಕ ಹಾಗೂ ಪ್ರಸಂಗಕರ್ತ ಡಾ.ಕೆ.ಎಂ.ರಾಘವ ನಂಬಿಯಾರ್ ಅವರಿಗೆ 2025ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ 2025ನೇ ಸಾಲಿನ ಗೌರವ ಪ್ರಶಸ್ತಿಯನ್ನು ರೆಂಜಾಳ ರಾಮಕೃಷ್ಣ ರಾವ್, ವಿಷ್ಣು ಮಂಜಪ್ಪ ಆಚಾರಿ ಬಳ್ಳೂರು, ಡಿ. ಮನೋಹರ್ ಕುಮಾರ್ ಬಂಟ್ವಾಳ, ಮುರಲಿ ಕಡೆಕಾರ್ ಉಡುಪಿ ಹಾಗೂ ರಮೇಶ್ ರಾಮ ನಗರ ಹಾಗೂ 2025ನೇ ಸಾಲಿನ ಯಕ್ಷಸಿರಿ ಪ್ರಶಸ್ತಿಯನ್ನು ಲಕ್ಷ್ಮಣ ಗೌಡ ಬೆಳಾಲ್, ದಾಸಪ್ಪ ಗೌಡ ಗೇರುಕಟ್ಟೆ, ಎ.ಜಿ. ನಾಗರಾಜು (ಮೂಡಲಪಾಯ), ದಾಸನಡ್ಡ ರಾಮ ಕುಲಾಲ್ ಕಾಸರಗೋಡು, ರಾಜೀವ್ ಶೆಟ್ಟಿ ಹೊಸಂಗಡಿ, ಕೇಶವ ಶಕ್ತಿನಗರ, ಸದಾಶಿವ ಕುಲಾಲ್ ವೇಣೂರು, ಬೆಳ್ಳಾರೆ ಮಂಜುನಾಥ ಭಟ್, ಜಿ.ಕೆ. ಶ್ರೀನಿವಾಸ ಸಾಲಿಯಾನ್ ಮಂಗಳೂರು ಮತ್ತು ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಇವರ ಹೆಸರಿನಲ್ಲಿ ನೀಡುತ್ತಿರುವ ದತ್ತಿನಿಧಿ ಪ್ರಶಸ್ತಿಯನ್ನು ದೇವದಾಸ ರಾವ್ ಕೊಡ್ಲಿ ಅವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಅಶೋಕ ಹಾಸ್ಯಗಾರ ಉ.ಕ., ಮತ್ತು ಮಣಿಪಾಲ್ ಯುನಿವರ್ಸಲ್ ಪ್ರೆಸ್ ಅವರಿಗೆ ಪ್ರದಾನ ಮಾಡಲಾಯಿತು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಯಕ್ಷಗಾನದ ಮೇರುನಟ ಆರುವ ಕೊರಗಪ್ಪ ಅವರ ಬಗ್ಗೆ ಅಕಾಡೆಮಿ ಮಾಡಿರುವ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಿದರು.
ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅಕಾಡೆಮಿಯಿಂದ ಪ್ರಕಟಿಸಲಾದ ಪುಸ್ತಕಗಳನ್ನು ಅನಾವರಣ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಪ್ರಶಸ್ತಿ ವಿಜೇತರ ಕಿರು ಪರಿಚಯ ಪುಸ್ತಕವನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿ ಗೋಪಾಲ ಸಿ.ಬಂಗೇರ, ಯಕ್ಷಗಾನ ಅಕಾಡೆಮಿ ಸದಸ್ಯರುಗಳಾದ ಕೃಷ್ಣಪ್ಪ ಪೂಜಾರಿ ಕಿನ್ಯ, ಗುರುರಾಜ ಭಟ್, ವಿನಯ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಕೊಪ್ಪಲ ಮೋಹನ್ ಕದ್ರಿ, ಸತೀಶ ಅಡಪ ಸಂಕಬೈಲ್, ರಾಜೇಶ್ ಕುಳಾಯಿ, ದಯಾನಂದ ಬೆಳಾಲ್, ಸುಧಾಕರ ಶೆಟ್ಟಿ, ಪುಟ್ಟಸ್ವಾಮಿ ಎ.ಆರ್., ವಿದ್ಯಾಧರ ಜಲವಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್. ಅವರು ಪ್ರಾಸ್ತಾವಕ ಮಾತುಗಳೊಂದಿಗೆ, ಸ್ವಾಗತಿಸಿದರು. ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಎಚ್. ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯ ಪ್ರಥ್ವಿ ರಾಜೇಶ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.








