ಕಾರ್ಕಳ :ದೇಶದಲ್ಲಿ ಉಂಟಾಗುತ್ತಿರುವ ಅನಿಲ ಮತ್ತು ಇಂಧನ ಕೊರತೆ ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ಅದರ ಪರಿಣಾಮ ಇತರ ದೇಶಗಳ ಮೇಲೂ ಬೀಳುವುದು ಸಹಜ. ಯುದ್ಧವು ಏಕಾಏಕಿ ಆರಂಭವಾಗುವುದಿಲ್ಲ; ಅದರ ಮುನ್ಸೂಚನೆಗಳು ಬಹಳ ಹಿಂದೆಯೇ ಲಭ್ಯವಾಗುತ್ತವೆ. ಆದರೂ ಭಾರತ ಅನಿಲ ಮತ್ತು ಇಂಧನ ಸಮಸ್ಯೆಯಲ್ಲಿ ಸಿಲುಕಿರುವುದಕ್ಕೆ ಹಲವು ಕಾರಣಗಳಿವೆ ಎಂದು ಅವರು ಹೇಳಿದ್ದಾರೆ.
ಇತರ ದೇಶಗಳ ಮೇಲಿನ ಅವಲಂಭನೆ, ಕೆಲವೇ ರಾಷ್ಟ್ರಗಳೊಂದಿಗೆ ಸರಬರಾಜು ಒಪ್ಪಂದ ಮಾಡಿಕೊಳ್ಳುವುದು, ಪೂರ್ವಸಂಗ್ರಹಣ (ಸ್ಟ್ರಾಟೆಜಿಕ್ ರಿಸರ್ವ್) ವ್ಯವಸ್ಥೆಯ ಕೊರತೆ ಹಾಗೂ ಅನಿಲ-ಇಂಧನವನ್ನು ಕೇವಲ ಆರ್ಥಿಕ ಅಗತ್ಯವೆಂದು ಪರಿಗಣಿಸಿ ರಾಷ್ಟ್ರೀಯ ಭದ್ರತೆಯ ಭಾಗವಾಗಿ ನೋಡದಿರುವುದು ಇಂದಿನ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಮಸ್ಯೆಗೆ ಪರಿಹಾರವಾಗಿ ದೇಶ ಸ್ವಾವಲಂಭಿಯಾಗಬೇಕಿದ್ದು, ಸೌರ, ಜಲ, ಗಾಳಿ ವಿದ್ಯುತ್, ಜೈವಿಕ ಅನಿಲ ಸೇರಿದಂತೆ ನವೀಕರಿಸಬಹುದಾದಶಕ್ತಿ ಮೂಲಗಳ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದಲ್ಲದೆ, ಅನಿಲ ಮತ್ತು ಇಂಧನ ಸರಬರಾಜಿಗಾಗಿ ಒಂದೆರಡು ದೇಶಗಳ ಮೇಲಷ್ಟೇ ಅವಲಂಭಿಸದೇ, ವಿವಿಧ ತೈಲೋತ್ಪಾದಕ ರಾಷ್ಟ್ರಗಳೊಂದಿಗೆ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎಂದಿದ್ದಾರೆ. ತುರ್ತು ಪರಿಸ್ಥಿತಿಗಳಿಗೆ ಮಾತ್ರವಲ್ಲದೆ, ದೇಶದ ದೀರ್ಘಕಾಲೀನ ಅಗತ್ಯಗಳನ್ನು ಪೂರೈಸುವಂತೆ ಪೂರ್ವಸಂಗ್ರಹಣ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಹ್ಯ ಹಾಗೂ ಆಂತರಿಕ ಭದ್ರತೆ ಎರಡೂ ಸಮಾನವಾಗಿ ಬಲವಾಗಿದ್ದಾಗ ಮಾತ್ರ ರಾಷ್ಟ್ರೀಯ ಭದ್ರತೆ ಸಾಧ್ಯವಾಗುತ್ತದೆ. ಬಲವಾದ ಆಂತರಿಕ ವ್ಯವಸ್ಥೆ ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿರುವುದೇ ಇಂದಿನ ಸಮಸ್ಯೆಗೆ ಪ್ರಮುಖ ಕಾರಣ ಎಂದು ಅವರು ಟೀಕಿಸಿದ್ದಾರೆ.







