ಕಾಪು: ಮನೆಗೆ ಕೇವಲ ಅರ್ಧ ಕಿಲೋಮೀಟರ್ ದೂರ ಉಳಿದಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ವರ್ಷದ ಬಾಲಕಿ ಸಾವನ್ನಪ್ಪಿದ ದುಃಖದ ಘಟನೆ ಕಾಪುವಿನಲ್ಲಿ ನಡೆದಿದೆ.
ಸಾತ್ವಿ ಶೆಟ್ಟಿ (8) ಮೃತಪಟ್ಟ ಬಾಲಕಿಯಾಗಿದ್ದು, ತಂದೆ ನಿತ್ಯಾನಂದ ಶೆಟ್ಟಿ ಅವರೊಂದಿಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಸ್, ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಸ್ಕೂಟಿ ಸವಾರ ನಿತ್ಯಾನಂದ ಶೆಟ್ಟಿ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ದುಬೈನಲ್ಲಿ ವಾಸವಾಗಿದ್ದ ಈ ಕುಟುಂಬವು ಶೀಘ್ರದಲ್ಲೇ ಊರಿನಲ್ಲಿ ನೆಲೆಸುವ ಯೋಜನೆ ಮಾಡಿಕೊಂಡಿತ್ತು. ಸಾತ್ವಿಗಾಗಿ ಉಡುಪಿಯ ಖಾಸಗಿ ಶಾಲೆಯಲ್ಲಿ ಪ್ರವೇಶ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿತ್ತು. ವಿಶೇಷವೆಂದರೆ, ನಾಳೆ ನಿತ್ಯಾನಂದ ಶೆಟ್ಟಿ ಅವರು ದುಬೈಗೆ ತೆರಳಬೇಕಾಗಿದ್ದು, ಅದಕ್ಕೂ ಮುನ್ನ ಕಾಪು ಪೇಟೆಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಅಪಘಾತ ನಡೆದ ಸ್ಥಳಕ್ಕೂ ಅವರ ಪೂವಣಿಗುತ್ತು ನಿವಾಸಕ್ಕೂ ಕೇವಲ ಅರ್ಧ ಕಿಲೋಮೀಟರ್ ದೂರವಿತ್ತು ಎಂಬುದು ಕುಟುಂಬದ ದುಃಖವನ್ನು ಮತ್ತಷ್ಟು ಗಾಢಗೊಳಿಸಿದೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







