ಬ್ರಹ್ಮಾವರ: ಭಜನಾ ಕ್ಷೇತ್ರಕ್ಕೆ ದೊಡ್ಡ ಸೇವೆ ಸಲ್ಲಿಸಿದ ಭಜನಾ ಸಂಘಟಕ ಪ್ರಕಾಶ್ ಕುಲಾಲ್ ಅವರ ಅಕಾಲಿಕ ಅಗಲಿಕೆ ಸಂದರ್ಭದಲ್ಲಿ ಟೀಂ ಅಭಿಮತ ಮತ್ತು ಜನಸೇವಾ ಟ್ರಸ್ಟ್ ವತಿಯಿಂದ ₹1 ಲಕ್ಷ ನೆರವು ನೀಡುತ್ತಿರುವುದು ಸ್ತುತ್ಯಾರ್ಹವಾದ ಕೆಲಸವಾಗಿದೆ ಎಂದು ಮಾಜಿ ಶಾಸಕ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ ಅವರು ನುಡಿದರು.
ಇತ್ತೀಚೆಗೆ ಅಗಲಿದ ಭಜನಾ ಸಂಘಟಕ ಪ್ರಕಾಶ್ ಕುಲಾಲ್ ಅವರ ಕುಟುಂಬಕ್ಕೆ ನೆರವಾಗಲು ಮಂದಾರ್ತಿಯ ನಮಸ್ತೆ ಭಾರತ್ ಟ್ರಸ್ಟ್ ಅಧ್ಯಕ್ಷ ಪ್ರಮೋದ್ ಮಂದಾರ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಹಾಯ ಅಭಿಯಾನದ ಭಾಗವಾಗಿ ಜನಸೇವಾ ಟ್ರಸ್ಟ್ ವತಿಯಿಂದ ನೀಡಲಾದ ಸಹಾಯ ಮೊತ್ತವನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಸಣ್ಣ ವಯಸ್ಸಿನಲ್ಲೇ ಆಕಸ್ಮಿಕವಾಗಿ ಅಗಲಿದ ಪ್ರಕಾಶ್ ಅವರ ಅಗಲಿಕೆ ನೋವಿನ ಸಂಗತಿ. ಈ ಕಠಿಣ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವ ಅವರು ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ನಮಸ್ತೆ ಭಾರತ್ ಟ್ರಸ್ಟ್ ನಡೆಸುತ್ತಿರುವ ಅಭಿಯಾನದ ಹಿಂದೆ ಮಾನವೀಯ ಅಂತಃಕರಣಗಳು ಕಾಣಿಸುತ್ತಿದೆ. ಈ ಅಭಿಯಾನದ ಜೊತೆಗೆ ಕೈ ಜೋಡಿಸಿರುವ, ಸಮಾಜಮುಖಿ ಕಾರ್ಯಗಳ ಮೂಲಕ ಕರಾವಳಿ ಕರ್ನಾಟಕದ ಅತೀ ದೊಡ್ಡ ಯುವಶಕ್ತಿಯಾಗಿ ಗುರುತಿಸಿಕೊಂಡಿರುವ ಟೀಂ ಅಭಿಮತ ಮತ್ತು ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ನೀಡಲಾದ ದೊಡ್ಡ ಮೊತ್ತದ ಜೊತೆಗೆ, ವೈಯಕ್ತಿಕ ಸಹಕಾರವನ್ನು ನೀಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮಸ್ತೆ ಭಾರತ್ ಟ್ರಸ್ಟ್ನ ಪ್ರಮೋದ್ ಮಂದಾರ್ತಿ, ಗಿಳಿಯಾರು ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಉದ್ಯಮಿ ರವಿಚಂದ್ರ ಶೇರುಗಾರ್, ಟೀಂ ಅಭಿಮತದ ಅರುಣ್ ಶೆಟ್ಟಿ ಗಿಳಿಯಾರ್, ಪ್ರವೀಣ್ ಯಕ್ಷೀಮಠ, ಶರತ್ ಕುಮಾರ್ ಶೆಟ್ಟಿ ಕೊತ್ತಾಡಿ, ದೇಲಟ್ಟು ಉಮೇಶ್ ಶೆಟ್ಟಿ, ದಿನೇಶ್ ಶೆಟ್ಟಿ ಬೇಳೂರು, ನಿಖಿಲ್ ನಾಯಕ್ ತೆಕ್ಕಟ್ಟೆ, ಸುದೇಶ್ ಶೆಟ್ಟಿ ಬ್ರಹ್ಮಾವರ, ದರ್ಶನ್ ಶೆಟ್ಟಿ, ಕಾರ್ತೇಶ್ ಪುತ್ರನ್, ಜಗದೀಶ್ ಆಚಾರ್ಯ, ಮನೋಜ್, ಮುಂತಾದವರು ಇದ್ದರು.







