ಬೆಂಗಳೂರು, ಮಾ. 26: ರಾಜ್ಯದಲ್ಲಿ ಮಹಾವೀರ ಜಯಂತಿ ಸಂಬಂಧಿಸಿದ ಸಾರ್ವಜನಿಕ ರಜೆ ದಿನಾಂಕದಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಕಂಡುಬಂದಿದೆ. ಮೊದಲು ಮಾರ್ಚ್ 31ಕ್ಕೆ ನಿಗದಿಯಾಗಿದ್ದ ರಜೆಯನ್ನು, ಇದೀಗ ಮಾರ್ಚ್ 30ಕ್ಕೆ ಮುಂದೂಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಧಾರ್ಮಿಕ ದತ್ತಿ ಇಲಾಖೆ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಜೈನ ಸಂಪ್ರದಾಯದ ಪ್ರಕಾರ ತಿಥಿ ಲೆಕ್ಕಾಚಾರ ಆಧಾರವಾಗಿ ಈ ಬದಲಾವಣೆಯನ್ನು ಶಿಫಾರಸು ಮಾಡಲಾಗಿದೆ.
ಜ್ಯೋತಿಷ್ಯ ಹಾಗೂ ಆಗಮ ಪಂಡಿತರ ಅಭಿಪ್ರಾಯದಂತೆ, ಸೂರ್ಯೋದಯದ ವೇಳೆಯ ತಿಥಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚೈತ್ರ ಶುಕ್ಲ ತ್ರಯೋದಶಿ ತಿಥಿ ಮಾರ್ಚ್ 30ರ ಬೆಳಗ್ಗೆಯೇ ಪ್ರಾರಂಭವಾಗುವುದರಿಂದ, ಅಂದು ಮಹಾವೀರ ಜಯಂತಿ ಆಚರಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಇದೇ ವೇಳೆ ಜೈನ ಸಮುದಾಯದ ಮುಖಂಡರೂ ಮಾರ್ಚ್ 30ರಂದುಲೇ ಜಯಂತಿ ಆಚರಿಸುತ್ತಿರುವುದರಿಂದ, ಅದೇ ದಿನ ಸರ್ಕಾರಿ ರಜೆ ಘೋಷಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಧಾರ್ಮಿಕ ದತ್ತಿ ಇಲಾಖೆ ಈಗಾಗಲೇ ಸಮಗ್ರ ವರದಿ ಸಿದ್ಧಪಡಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR)ಗೆ ಸಲ್ಲಿಸಿದೆ. ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದರೆ, ಮಾರ್ಚ್ 30ರಂದು ರಾಜ್ಯಾದ್ಯಂತ ಸಾರ್ವಜನಿಕ ರಜೆ ಜಾರಿಗೆ ಬರಲಿದೆ.







