ಬ್ರಹ್ಮಾವರ, ಮಾ. 25: ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಬೈಂದೂರು ತಾಲೂಕಿನ ಕಾಲ್ತೋಡು ನಿವಾಸಿ ದೀಪಿಕಾ ಹೆಚ್ (29) ಅವರ ಪತಿ ಪ್ರಕಾಶ್ ಕುಲಾಲ್ (37) ಅವರು ಮಾರ್ಚ್ 23ರ ರಾತ್ರಿ 9:46ಕ್ಕೆ ಪತ್ನಿಯೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದರು. ಬಳಿಕ ಮಾರ್ಚ್ 24ರ ಮಧ್ಯಾಹ್ನ 12:30ರ ಸುಮಾರಿಗೆ ದೀಪಿಕಾ ಅವರು ಗಂಡನ ಮನೆಗೆ ಆಗಮಿಸಿದಾಗ, ಕೋಣೆಯ ಬಾಗಿಲು ಒಳಗಿನಿಂದ ಹಾಕಿಕೊಂಡಿದ್ದು, ಕರೆ ಮಾಡಿದರೂ ಪ್ರತಿಕ್ರಿಯೆ ದೊರಕಿಲ್ಲ.
ಅನುಮಾನಗೊಂಡ ಕುಟುಂಬದವರು ಮೇಲ್ಛಾವಣಿಯ ಹೆಂಚು ತೆರವುಗೊಳಿಸಿ ಒಳಗೆ ಪ್ರವೇಶಿಸಿದಾಗ, ಪ್ರಕಾಶ್ ಕುಲಾಲ್ ಅವರು ಹಾಸಿಗೆಯ ಮೇಲೆಯೇ ಅಚೇತನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎಡ ಮೂಗಿನಿಂದ ರಕ್ತ ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರನ್ನು ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್ ಮೂಲಕ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಮೃತರಿಗೆ ಈ ಹಿಂದೆ ಕಡಿಮೆ ರಕ್ತದೊತ್ತಡ, ಗ್ಯಾಸ್ಟ್ರಿಕ್ ಹಾಗೂ ಎದೆನೋವಿನ ಸಮಸ್ಯೆಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೂಲ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ (ಅಧಿಕೃತ ವೆಬ್ಸೈಟ್)







