ಮಣಿಪಾಲ, ಮಾರ್ಚ್ 23: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಹಾಗೂ ಕಸ್ತೂರ್ಬಾ ಆಸ್ಪತ್ರೆಗಳ ಕ್ರಿಟಿಕಲ್ ಕೇರ್ ಮತ್ತು ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಅಂಗಾಂಗ ದಾನ ಜಾಗೃತಿ ಕುರಿತು ಎರಡು ದಿನಗಳ ನಿರಂತರ ವೈದ್ಯಕೀಯ ಶಿಕ್ಷಣ (CME) ಕಾರ್ಯಕ್ರಮವನ್ನು ಮಾರ್ಚ್ 18 ಮತ್ತು 19 ರಂದು ಆಯೋಜಿಸಲಾಯಿತು.
ಮೆದುಳಿನ ಮರಣದ ನಂತರ (DBD) ಹಾಗೂ ರಕ್ತಪರಿಚಲನೆಯ ಮರಣದ ನಂತರ (DCD) ನಡೆಯುವ ಅಂಗಾಂಗ ದಾನದ ಕುರಿತು ಅರಿವು ಹೆಚ್ಚಿಸುವುದು ಮತ್ತು ಆರೋಗ್ಯ ವೃತ್ತಿಪರರ ಸಾಮರ್ಥ್ಯ ವೃದ್ಧಿ ಮಾಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಮಾರ್ಚ್ 18ರಂದು ನಡೆದ ಅಧಿವೇಶನಗಳಲ್ಲಿ ಸುಮಾರು 150 ನರ್ಸಿಂಗ್ ಸಿಬ್ಬಂದಿ ಭಾಗವಹಿಸಿದರೆ, ಮಾರ್ಚ್ 19ರಂದು 250 MBBS ವಿದ್ಯಾರ್ಥಿಗಳು ಹಾಗೂ ವಿವಿಧ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಭಾಗಗಳ ಸುಮಾರು 100 ಅಧ್ಯಾಪಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಣಿಪಾಲ ಅಂಗಾಂಗ ಹಂಚಿಕೆ ಮತ್ತು ಕಸಿ ವಿಭಾಗದ ರಾಷ್ಟ್ರೀಯ ಮುಖ್ಯಸ್ಥರಾದ ಡಾ.(ಕರ್ನಲ್) ಅವ್ನಿಶ್ ಸೇಠ್ ಭಾಗವಹಿಸಿದರು.
ಗೌರವ ಅತಿಥಿಗಳಾಗಿ ಮೋಹನ್ ಫೌಂಡೇಶನ್ನ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಪಲ್ಲವಿ ಕುಮಾರ್ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂಡಿ ವೆಂಕಟೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗಾಂಗ ದಾನದ ಮಹತ್ವವನ್ನು ಅವರು ವಿವರಿಸಿ, ಅಂಗಾಂಗ ಕಸಿ ಕಾರ್ಯಕ್ರಮಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ನೆರವಾಗುವಂತೆ ಮಾಹೆ ಮಣಿಪಾಲದಲ್ಲಿ ಅತ್ಯಾಧುನಿಕ ಸಿಮ್ಯುಲೇಶನ್ ಸೌಲಭ್ಯ ಸ್ಥಾಪಿಸುವ ಯೋಜನೆ ಇರುವುದಾಗಿ ತಿಳಿಸಿದರು.
ಆರೋಗ್ಯ ವಿಜ್ಞಾನಗಳ ಸಹ ಉಪಕುಲಪತಿ ಡಾ. ಶರತ್ ಕುಮಾರ್ ರಾವ್ ಸಂಸ್ಥೆಯ ನೈತಿಕ ಹಾಗೂ ಪರಿಣಾಮಕಾರಿ ಅಂಗಾಂಗ ಕಸಿ ಕಾರ್ಯಕ್ರಮಗಳ ಬದ್ಧತೆಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅನಿಲ್ ಕೆ. ಭಟ್, ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಬೆಂಬಲ ನೀಡಿದರು.
ಅಧಿವೇಶನಗಳಲ್ಲಿ ತಜ್ಞರ ಉಪನ್ಯಾಸಗಳು, ಸಂವಾದಾತ್ಮಕ ಚರ್ಚೆಗಳು ಹಾಗೂ ಅಂಗಾಂಗ ದಾನದ ವೈದ್ಯಕೀಯ, ನೈತಿಕ ಮತ್ತು ಪ್ರಾಯೋಗಿಕ ಅಂಶಗಳ ಕುರಿತು ವಿಶ್ಲೇಷಣೆ ನಡೆಯಿತು. ಕಾರ್ಯಕ್ರಮದ ವೇಳೆ ಸುಮಾರು 270 ಮಂದಿ ಅಂಗಾಂಗ ದಾನಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞೆ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ತಜ್ಞರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಅಂಗಾಂಗ ದಾನ ಕುರಿತು ಸಮಾಜದಲ್ಲಿ ಹೆಚ್ಚುತ್ತಿರುವ ಜಾಗೃತಿಯನ್ನು ಪ್ರತಿಬಿಂಬಿಸಿದೆ ಎಂದು ಸಂಘಟಕರು ತಿಳಿಸಿದ್ದಾರೆ.







