ಸಾಣೂರು, ಮಾ. 20: ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಶಾಂಭವಿ ಸೇತುವೆ ಸಮೀಪ ಒಡೆದು ಹೋಗಿದ್ದ ಕುಡಿಯುವ ನೀರಿನ ಪೈಪ್ಲೈನ್ನ್ನು ಹೆದ್ದಾರಿ ಗುತ್ತಿಗೆದಾರರು ಯುಗಾದಿ ದಿನವಾದ ಗುರುವಾರ ಮಧ್ಯಾಹ್ನ ಸುಮಾರು 12:40ರ ಸುಮಾರಿಗೆ ದುರಸ್ತಿ ಮಾಡಿದ್ದಾರೆ.
ಕಳೆದ ಆರು ದಿನಗಳಿಂದ ನಿರಂತರವಾಗಿ ಕಾಲುವೆಯಂತೆ ಹರಿದು ಅಮೂಲ್ಯ ಕುಡಿಯುವ ನೀರು ವ್ಯರ್ಥವಾಗುತ್ತಿದ್ದ ಸಮಸ್ಯೆಗೆ ಕೊನೆಗೂ ತೆರೆ ಬಿದ್ದಂತಾಗಿದೆ.
ತುರ್ತು ಪ್ರಾಮುಖ್ಯತೆಯ ಈ ದುರಸ್ತಿ ಕಾರ್ಯವನ್ನು ಐದುರಿಂದ ಆರು ದಿನಗಳ ಕಾಲ ವಿಳಂಬವಾಗಿ ಕೈಗೊಂಡಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಳಂಬಕ್ಕೆ ಸ್ಥಳೀಯ ಪಂಚಾಯತ್ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರೇ ಹೊಣೆಗಾರರಾಗಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.
ಇನ್ನಾದರೂ ಸಂಬಂಧಿತ ಅಧಿಕಾರಿಗಳು ಎಚ್ಚರಿಕೆ ವಹಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.







