ಉಡುಪಿ, ಮಾ. 20: ಜಿಲ್ಲೆಯಾದ್ಯಂತ ಪವಿತ್ರ ಈದುಲ್ ಫಿತ್ರ್ ಹಬ್ಬವನ್ನು ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಉಡುಪಿ ನಗರ ಸೇರಿದಂತೆ ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ ಮತ್ತು ಕಾರ್ಕಳ ತಾಲೂಕಿನ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿತು. ಬೆಳಗ್ಗೆ ಮುಸ್ಲಿಂ ಭಕ್ತರು ಅರ್ಹರಿಗೆ ಫಿತರ್ ಝಕಾತ್ ವಿತರಿಸಿ, ಹೊಸ ವಸ್ತ್ರ ಧರಿಸಿ ಮಸೀದಿಗಳತ್ತ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಕೆಲವೆಡೆ ಮಹಿಳೆಯರಿಗೂ ಪ್ರತ್ಯೇಕವಾಗಿ ನಮಾಝ್ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ನಮಾಝ್ ಬಳಿಕ ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ್ರಶೀದ್ ನದ್ವಿ ಹಾಗೂ ಅಂಜುಮಾನ್ ಮಸೀದಿಯಲ್ಲಿ ಮೌಲಾನಾ ಇನಾಯುತುಲ್ಲಾ ರಝ್ವಿ ಅವರ ನೇತೃತ್ವದಲ್ಲಿ ನಮಾಝ್ ನೆರವೇರಿತು. ಈ ಸಂದರ್ಭದಲ್ಲಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಹಬ್ಬದ ಸಂದೇಶ ನೀಡಿದರು.
ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ಅವರ ಮಾರ್ಗದರ್ಶನದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ನಡೆಯಿತು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಭಾಗವಹಿಸಿದ್ದರು.
ಕುಂದಾಪುರದಲ್ಲಿ ಜುಮಾ ಮಸೀದಿಯಿಂದ ಈದ್ ಮೆರವಣಿಗೆ ಆರಂಭವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಝ್ ನೆರವೇರಿತು. ಬ್ರಹ್ಮಗಿರಿ ನಾಯರ್ಕೆರೆಯ ಹಾಶಿಮಿ ಮಸೀದಿಯ ಇಮಾಮ್ ಒಬೇದುರ್ರಹ್ಮಾನ್ ನದ್ವಿ ನೇತೃತ್ವ ವಹಿಸಿದ್ದರು.
ಧರ್ಮಗುರುಗಳು ತಮ್ಮ ಉಪನ್ಯಾಸದಲ್ಲಿ ಯುವಜನತೆ ಮಾದಕ ವ್ಯಸನಗಳಿಂದ ದೂರವಿರಬೇಕು, ಅಜಾಗ್ರತೆಯಿಂದ ವಾಹನ ಚಲಾವಣೆ ತಪ್ಪಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸುವ ಅಗತ್ಯವನ್ನೂ ಒತ್ತಿಹೇಳಿದರು.
ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾದ್ಯಂತ ಮಸೀದಿಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕುಂದಾಪುರದಲ್ಲಿ ಸಂಭ್ರಮದ ಆಚರಣೆ
ಕುಂದಾಪುರ: ಈದುಲ್ ಫಿತ್ರ್ ಹಬ್ಬವನ್ನು ಇಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಜಾಮೀಯಾ ಮಸೀದಿಯಿಂದ ಮೆರವಣಿಗೆ ನಡೆಸಿ ನಗರ ಮಧ್ಯಭಾಗದ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಜಮಾತ್ ಖತೀಬ್ ಶಾಹೀದ್ ಹುಸೇನ್ ನಮಾಝ್ ಹಾಗೂ ದುವಾ ನೆರವೇರಿಸಿದರು.
ಹಬ್ಬದ ಸಂದರ್ಭದಲ್ಲಿ ಜನರು ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ಕೋರಿಕೊಂಡು ಸಿಹಿ ಹಂಚಿಕೊಂಡರು. ಕುಂದಾಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬ ಶಾಂತಿಯುತವಾಗಿ ನಡೆಯಿತು.
ಚಂದ್ರದರ್ಶನದ ಹಿನ್ನೆಲೆ ಕರಾವಳಿ ಭಾಗದಲ್ಲಿ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಿಸಲಾಯಿತು.







