ಚಿಕ್ಕಮಗಳೂರು, ಮಾ. 20: ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂಭಾಗದಲ್ಲಿ ವಾಮಾಚಾರ ನಡೆದಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಅಮಾವಾಸ್ಯೆ ಹಿನ್ನೆಲೆ ಬುಧವಾರ (ಮಾ.18) ಮಧ್ಯರಾತ್ರಿ ವೇಳೆ ಕಂಚಿನಕೆರೆ ಕಾಲಭೈರವೇಶ್ವರ ದೇವಾಲಯದ ಎದುರು ವಾಮಾಚಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ದೇವಾಲಯದ ಮುಂಭಾಗದಲ್ಲಿ ದೊಡ್ಡ ಕಲ್ಲುಗಳನ್ನು ಅಳವಡಿಸಿ ವೃತ್ತಾಕಾರದಲ್ಲಿ ಸಜ್ಜುಗೊಳಿಸಿ, ಅದರ ಮಧ್ಯಭಾಗದಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿಕೊಂಡು ವಾಮಾಚಾರ ನಡೆಸಲಾಗಿದೆ. ಸ್ಥಳದಲ್ಲೇ ತೆಂಗಿನಕಾಯಿ, ಕುಂಬಳಕಾಯಿ, ನಾಣ್ಯಗಳನ್ನೂ ಕಾಣಲಾಗಿದೆ.
ಈ ದೇವಾಲಯವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಕಳಸೇಶ್ವರ ಸ್ವಾಮಿ ದೇವಾಲಯಕ್ಕೆ ಸಂಬಂಧಪಟ್ಟ ಕಾಲಭೈರವನ ದೇಗುಲವಾಗಿದ್ದು, ಪ್ರತಿ ವರ್ಷ ಗಿರಿಜಾ ಕಲ್ಯಾಣ ರಥೋತ್ಸವ ಇದೇ ಮಾರ್ಗವಾಗಿ ಸಾಗುತ್ತದೆ. ಇಂತಹ ಪವಿತ್ರ ಸ್ಥಳದಲ್ಲೇ ವಾಮಾಚಾರ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಳೆದ ವರ್ಷವೂ ಯುಗಾದಿ ಹಬ್ಬದ ಮುನ್ನ ಇದೇ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಗಮನಾರ್ಹವಾಗಿದೆ. ಜನ ಸಂಚಾರ ಹೆಚ್ಚು ಇರುವ, ದೇವಸ್ಥಾನ ಸುತ್ತಮುತ್ತ ಮನೆಗಳಿರುವ ಪ್ರದೇಶವಾಗಿದ್ದರೂ, ಮಧ್ಯರಾತ್ರಿ 2ರಿಂದ 3 ಗಂಟೆಯ ಅವಧಿಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.







