ಬಂಟ್ವಾಳ, ಮಾ. 19 : ತಾಲ್ಲೂಕಿನ ಸರಪಾಡಿ ನಾವೂರು ಗ್ರಾಮದ ಗಡಿಭಾಗವಾದ ಪೂಪಾಡಿಕಟ್ಟೆ ಸಮೀಪದ ನೆಕ್ಕಿಲಾರು ಪ್ರದೇಶದಲ್ಲಿ ಬುಧವಾರ ಮುಂಜಾನೆ ಅಪರೂಪದ ಘಟನೆ ಕಂಡುಬಂದಿದೆ. ಸ್ಥಳೀಯ ನಿವಾಸಿ ರಾಜೇಶ್ ನಾಯಕ್ ಅವರ ಮನೆಯ ಆವರಣದಲ್ಲಿ ಬೃಹತ್ ಮೊಸಳೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು.
ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ನೇತ್ರಾವತಿ ನದಿ ಹರಿಯುತ್ತಿರುವ ಹಿನ್ನೆಲೆ, ಮೊಸಳೆ ನದಿಯಿಂದಲೇ ಇಲ್ಲಿ ಬಂದಿರಬಹುದು ಎಂದು ಊಹಿಸಲಾಗಿದೆ. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ತೋಟದ ಭಾಗದಲ್ಲಿ ಅಸಾಮಾನ್ಯ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ರಾಜೇಶ್ ನಾಯಕ್ ಎದ್ದು ಪರಿಶೀಲನೆ ನಡೆಸಿದರು. ಈ ವೇಳೆ ಮನೆಯ ಹಿಂಬಾಗಿಲು ತೆರೆಯುತ್ತಿದ್ದಂತೆ ಆವರಣದಲ್ಲಿ ಸುಮಾರು 7ರಿಂದ 8 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿತು.
ನಂತರ ಬೆಳಕು ಹಚ್ಚುತ್ತಿದ್ದಂತೆ ಮೊಸಳೆ ಮಾನವರ ಹಾಜರಾತಿ ಗಮನಿಸಿ ತೋಟದ ದಿಕ್ಕಿಗೆ ಸರಿದಿದೆ. ಈ ಪ್ರದೇಶದ ನದಿಯಲ್ಲಿ ಮೊಸಳೆಗಳಿರುವ ಬಗ್ಗೆ ಮಾಹಿತಿ ಇದ್ದರೂ, ಮನೆ ಸಮೀಪಕ್ಕೆ ಆಗಮಿಸಿರುವುದು ಇದೇ ಮೊದಲ ಬಾರಿ ಎಂದು ರಾಜೇಶ್ ನಾಯಕ್ ತಿಳಿಸಿದ್ದಾರೆ.







