ಉಡುಪಿ: ಶಿಕ್ಷಕಿಯೊಬ್ಬರ ಮನೆಯಲ್ಲಿ ಕಳ್ಳರು ನುಗ್ಗಿ ಸುಮಾರು ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಕೊಡಂಕೂರು ಪತ್ತೂರು ಗ್ರಾಮದ ಸಾಯಿಬಾಬಾ ನಗರದ ನಿವಾಸಿ, ಮೈಸೂರು ಜಿಲ್ಲೆಯ ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ಶಶಿರೇಖಾ ಬಿ. (38) ಅವರು ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಮೇ 25ರಂದು ರಾತ್ರಿ 9 ಗಂಟೆಗೆ ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದರು.
ಆಗಸ್ಟ್ 9ರಂದು ರಾತ್ರಿ 10.30ರ ಸುಮಾರಿಗೆ ಪತಿ ಶರತ್ ಕುಮಾರ್ ಎಂ.ಬಿ. ಹಾಗೂ ಮನೆಯವರೊಂದಿಗೆ ಮನೆಗೆ ವಾಪಸ್ ಬಂದಾಗ ಮನೆಯೊಳಗಿನ ಕಪಾಟು ಹಾಗೂ ಬೀರುಗಳ ಬಾಗಿಲು ತೆರೆದಿರುವುದು ಮತ್ತು ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.
ಕಳ್ಳರು ಮನೆಯ ಪ್ರವೇಶದ್ವಾರವನ್ನು ಯಾವುದೋ ಆಯುಧದಿಂದ ಮೀಟಿ ತೆರೆಯಲು ಪ್ರಯತ್ನಿಸಿದ್ದು, ಬಳಿಕ ಮನೆಯ ದಕ್ಷಿಣ ಭಾಗದ ಗೋಡೆಯನ್ನು ಹತ್ತಿ ಟೆರೆಸ್ ಮೇಲಿನ ಬಾಗಿಲನ್ನು ಆಯುಧದಿಂದ ಮೀಟಿ ತೆರೆದು ಮನೆಯೊಳಗೆ ಪ್ರವೇಶಿಸಿರುವುದು ಕಂಡುಬಂದಿದೆ.
ಮನೆಯ ಬೆಡ್ರೂಂನ ಕಪಾಟಿನಲ್ಲಿದ್ದ 100 ಗ್ರಾಂ ತೂಕದ ಚಿನ್ನದ ಸರ, 1 ಗ್ರಾಂ ಹಾಗೂ ½ ಗ್ರಾಂ ತೂಕದ ಚಿನ್ನದ ಕಾಯಿನ್ಗಳು, ಮತ್ತೊಂದು ಬೆಡ್ರೂಂನಲ್ಲಿದ್ದ ಬೆಳ್ಳಿಯ ಚೆಂಬು, ಹರಿವಾಣ, ಪಂಚಪಾತ್ರೆ, ತಟ್ಟೆ, ದೇವರ ಕೋಣೆಯಲ್ಲಿದ್ದ ಬೆಳ್ಳಿಯ ಅರಸಿನ ಕುಂಕುಮ ಬಟ್ಟಲು, ಎರಡು ಬೆಳ್ಳಿಯ ದೀಪಗಳು ಹಾಗೂ ಬೆಳ್ಳಿಯ ಕಾಲುಚೈನ್ ಸೇರಿದಂತೆ ಒಟ್ಟು 1 ಕೆಜಿ 650 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಕಳವಾಗಿವೆ.
ಇದರ ಜೊತೆಗೆ ಮನೆಯಲ್ಲಿದ್ದ ₹40,000 ನಗದು ಕೂಡ ಕಳ್ಳತನವಾಗಿದ್ದು, ಚಿನ್ನ, ಬೆಳ್ಳಿ ಹಾಗೂ ನಗದು ಸೇರಿ ಒಟ್ಟು ₹12,00,000 ಮೌಲ್ಯದ ಸೊತ್ತು ಕಳವಾಗಿರುವುದಾಗಿ ದೂರು ನೀಡಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






