ಬೆಂಗಳೂರು, ಮಾ. 19: ಯುಗಾದಿ ಹಾಗೂ ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ ಇಲಾಖೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಘೋಷಿಸಿದೆ. ಯಶವಂತಪುರ–ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ಮಾರ್ಗದಲ್ಲಿ ಒಂದು ಟ್ರಿಪ್ ವಿಶೇಷ ಸೇವೆ ಒದಗಿಸಲಾಗುತ್ತಿದೆ.
ರೈಲು ಸಂಖ್ಯೆ 06271 ಯಶವಂತಪುರ–ಮಡಗಾಂವ್ ವಿಶೇಷ ಎಕ್ಸ್ಪ್ರೆಸ್, ಮಾರ್ಚ್ 20 (ಶುಕ್ರವಾರ) ಬೆಳಿಗ್ಗೆ 11:50ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 21 (ಶನಿವಾರ) ಬೆಳಿಗ್ಗೆ 6:45ಕ್ಕೆ ಮಡಗಾಂವ್ ತಲುಪಲಿದೆ.
ಮತ್ತೊಂದೆಡೆ, ರೈಲು ಸಂಖ್ಯೆ 06272 ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ಪ್ರೆಸ್, ಮಾರ್ಚ್ 22 (ಭಾನುವಾರ) ಬೆಳಿಗ್ಗೆ 11:00ಕ್ಕೆ ಮಡಗಾಂವ್ನಿಂದ ಪ್ರಯಾಣ ಆರಂಭಿಸಿ, ಮಾರ್ಚ್ 23 (ಸೋಮವಾರ) ಬೆಳಿಗ್ಗೆ 5:20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ವಿಶೇಷ ರೈಲುಗಳಿಗೆ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಹಾಗೂ ಕಾರವಾರ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ನೀಡಲಾಗಿದೆ.
ಒಟ್ಟು 20 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ 1 ಎಸಿ ಫಸ್ಟ್ ಕ್ಲಾಸ್, 2 ಎಸಿ 2-ಟೈರ್, 2 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಲಗೇಜ್/ಬ್ರೇಕ್ ವ್ಯಾನ್ ಬೋಗಿಗಳು ಸೇರಿವೆ.







