ಉಡುಪಿ, ಮಾ. 19: ಉಡುಪಿ ನಗರದಲ್ಲಿ ಮಾರ್ಚ್ 20ರಿಂದ 22ರವರೆಗೆ ಆಯೋಜಿಸಲಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮವನ್ನು ಕುರಿತಂತೆ ವಿವಾದ ತೀವ್ರಗೊಂಡಿದೆ.
ತಮಿಳುನಾಡಿನ ಪ್ರಚಾರಕ ಮೋಹನ್ ಸಿ. ಲಾಜರಸ್ ನೇತೃತ್ವದಲ್ಲಿ ಮಿಷನ್ ಕಾಂಪೌಂಡ್ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಇದರ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಕಾರ್ಯಕ್ರಮವು ಮತಾಂತರ ಉದ್ದೇಶ ಹೊಂದಿದೆ ಎಂದು ಆರೋಪಿಸಿರುವ ಸಂಘಟನೆಗಳು, ಜಿಲ್ಲಾಡಳಿತ ತಕ್ಷಣ ಅನುಮತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿವೆ.
ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಮಾತನಾಡಿ, “ಇಂತಹ ಕಾರ್ಯಕ್ರಮಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ವಿವಾದಾತ್ಮಕ ವ್ಯಕ್ತಿಗಳಿಗೆ ವೇದಿಕೆ ನೀಡಬಾರದು” ಎಂದು ಅಭಿಪ್ರಾಯಪಟ್ಟರು.
ಮೋಹನ್ ಸಿ. ಲಾಜರಸ್ ವಿರುದ್ಧ ಹಿಂದಿನಿಂದಲೇ ದ್ವೇಷ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಮತಾಂತರ ಆರೋಪಗಳು ಕೇಳಿಬಂದಿದ್ದು, ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಸಂಘಟನೆಗಳು ದೂರಿವೆ.
ಇದಲ್ಲದೆ, ‘ಜೀಸಸ್ ರಿಡೀಮ್ಸ್’ ಸಂಸ್ಥೆಯ ಮೇಲೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಕೇಂದ್ರ ಗೃಹ ಸಚಿವಾಲಯವು ಅದರ ಲೈಸೆನ್ಸ್ ಅಮಾನತು ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆದಲ್ಲಿ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಕಾರ್ಯಕ್ರಮಕ್ಕೆ ಅವಕಾಶ ನೀಡಿದಲ್ಲಿ ಜಿಲ್ಲಾವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.







