ಉಡುಪಿ, ಮಾ. 18: ಸರಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಯುವತಿಯನ್ನು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೊಮ್ಮರಬೆಟ್ಟು ನಿವಾಸಿ ನವ್ಯಾ ನಾಯ್ಕ ವಂಚನೆಗೆ ಒಳಗಾದವರು.
ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ಅದೇ ಆಸ್ಪತ್ರೆಯಲ್ಲಿ ಮಾನವ ಸಂಪನ್ಮೂಲ (HR) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಜೇಯ್ ಎಂಬಾತನೊಂದಿಗೆ ಪರಿಚಯ ಬೆಳೆದಿತ್ತು.
ನವ್ಯಾ ಅವರು ತರಬೇತಿ ಅವಧಿಯಲ್ಲಿದ್ದಾಗಲೇ, ನೀವು ಎಸ್ಟಿ ಸಮುದಾಯದವರಾಗಿರುವುದರಿಂದ ಸರಕಾರಿ ಉದ್ಯೋಗ ಸುಲಭವಾಗಿ ಸಿಗುತ್ತದೆ, ಆದರೆ ಕೆಲ ವೆಚ್ಚಗಳು ಅಗತ್ಯವಿದೆ ಎಂದು ಹೇಳಿ ಮೊದಲು ₹2,000 ಪಡೆದುಕೊಂಡಿದ್ದಾನೆ. ನಂತರ ನರ್ಸಿಂಗ್ ಪೂರ್ಣಗೊಳಿಸಿ ಮಣಿಪಾಲ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ, ಆತನು ಮತ್ತೆ ಸಂಪರ್ಕಿಸಿ ಸರಕಾರಿ ಉದ್ಯೋಗ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿ ಹಂತ ಹಂತವಾಗಿ ₹5.40 ಲಕ್ಷ ಹಣ ವಸೂಲಿಸಿದ್ದಾನೆ.
ಇದಷ್ಟೇ ಅಲ್ಲದೆ, ಸುಮಾರು ₹2,55,498 ಮೌಲ್ಯದ ವಿವಿಧ ಮೊಬೈಲ್ ಫೋನ್ಗಳನ್ನು ಕೂಡ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡದಿದ್ದರೆ ಜೀವ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪವೂ ಮಾಡಲಾಗಿದೆ.
ಈ ಕುರಿತು ನವ್ಯಾ ನಾಯ್ಕ ಅವರು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.







