ಕಾರ್ಕಳ: ತಾಲೂಕಿನ ಇನ್ನಾ ಗ್ರಾಮದ ಮಡ್ಮಣ್ ಎಂಬಲ್ಲಿರುವ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ.
ದೈವಸ್ಥಾನದ ಕಮಿಟಿಯ ಕಾರ್ಯದರ್ಶಿಯಾಗಿರುವ ಸುನಿಲ್ ಕುಮಾರ್ (68) ಅವರು ನೀಡಿದ ದೂರಿನಂತೆ, ಆ.11ರಂದು ರಾತ್ರಿ 7.30ರಿಂದ ಆ.12ರಂದು ಬೆಳಿಗ್ಗೆ 6.30ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿದೆ.
ದೈವಸ್ಥಾನದ ಮುಂಭಾಗದ ಗ್ರಿಲ್ ಶೆಟರ್ನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಒಳಗಡೆ ಬೀಗ ಹಾಕಲಾಗಿದ್ದ ಎರಡು ಕಾಣಿಕೆ ಡಬ್ಬಿಗಳ ಪೈಕಿ ಒಂದು ಡಬ್ಬಿಯ ಬೀಗ ಹಾಗೂ ಮತ್ತೊಂದು ಡಬ್ಬಿಯ ಬೀಗದ ಕೊಂಡಿಯನ್ನು ಮುರಿದಿದ್ದಾರೆ. ಬಳಿಕ ಕಾಣಿಕೆ ಡಬ್ಬಿಗಳಲ್ಲಿದ್ದ ಅಂದಾಜು ₹1.20 ಲಕ್ಷ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಆ.12ರಂದು ಬೆಳಿಗ್ಗೆ ಸುಮಾರು 6.30ಕ್ಕೆ ದೈವಸ್ಥಾನದ ಸ್ವಚ್ಛತೆಗಾಗಿ ಬಂದ ಬಾಲಕೃಷ್ಣ ಶೆಟ್ಟಿ ಅವರು ಬೀಗ ಮುರಿದಿರುವುದನ್ನು ಗಮನಿಸಿ ದೈವಸ್ಥಾನದ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಧ್ಯಕ್ಷರು ಹಾಗೂ ಇತರರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







