ಬೆಳ್ತಂಗಡಿ, ಮಾ. 18: ರೌಡಿಶೀಟರ್ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರು ಹೈಕೋರ್ಟ್ ಸೂಚನೆಯಂತೆ ಮೂರನೇ ಬಾರಿ ಗಡೀಪಾರು ಆದೇಶ ಹೊರಡಿಸಿದ್ದಾರೆ. ಮಾರ್ಚ್ 16ರಂದು ಜಾರಿಯಾದ ಈ ಆದೇಶದ ಪ್ರಕಾರ, ಮಾರ್ಚ್ 16ರಿಂದ ಸೆಪ್ಟೆಂಬರ್ 16ರವರೆಗೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ಪ್ರದೇಶಕ್ಕೆ ವಲಸೆಗೊಳಿಸಲಾಗಿದೆ.
ಆದೇಶ ಜಾರಿಗೆ ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ನೇತೃತ್ವದ ಪೊಲೀಸ್ ತಂಡ ಮಾರ್ಚ್ 16ರ ರಾತ್ರಿ ಉಜಿರೆ ತಿಮರೋಡಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದರೂ, ಅವರು ಅಲ್ಲಿ ಕಾಣಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕೆಪಿ ಕಾಯ್ದೆಯ ಪ್ರಕಾರ ತಲೆಮರೆಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಅನುಸರಿಸುವ ವಿಧಾನದಲ್ಲಿ, ಗಡೀಪಾರು ಆದೇಶದ ಪ್ರತಿಯನ್ನು ಮನೆಯ ಗೋಡೆಯ ಮೇಲೆ ಅಂಟಿಸಲಾಗಿದೆ.
ಈ ಹಿಂದೆ 2025ರ ಸೆಪ್ಟೆಂಬರ್ 17ರಂದು ಮಹೇಶ್ ಶೆಟ್ಟಿ ಅವರನ್ನು ಒಂದು ವರ್ಷದ ಅವಧಿಗೆ ಗಡೀಪಾರು ಮಾಡುವ ಮೊದಲ ಆದೇಶ ಹೊರಡಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಸಮರ್ಪಕ ಕಾರಣ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ನಂತರ ಪುತ್ತೂರು ಎಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಡಿಸೆಂಬರ್ 16ರಂದು 9 ತಿಂಗಳ ಅವಧಿಗೆ ಎರಡನೇ ಗಡೀಪಾರು ಆದೇಶ ಹೊರಬಂದಿತ್ತು. ಈ ಸಂಬಂಧ ಉಜಿರೆ ಪ್ರದೇಶದಲ್ಲಿ ಪೊಲೀಸ್ ಪ್ರಕಟಣೆ ಸಹ ಮಾಡಲಾಗಿತ್ತು.
ಎರಡನೇ ಆದೇಶವನ್ನೂ ಪ್ರಶ್ನಿಸಿ ಅವರು ಮತ್ತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅವರ ಆಕ್ಷೇಪಣೆಗಳನ್ನು ಪರಿಗಣಿಸಿದ ನ್ಯಾಯಾಲಯ, ಮೂರು ವಾರಗಳೊಳಗೆ ಹೊಸ ಆದೇಶ ಹೊರಡಿಸಲು ಸೂಚಿಸಿತ್ತು. ಅದರಂತೆ ಇದೀಗ ಮೂರನೇ ಬಾರಿ ಆರು ತಿಂಗಳ ಅವಧಿಗೆ ಗಡೀಪಾರು ಆದೇಶ ನೀಡಲಾಗಿದೆ. ಆರಂಭದಲ್ಲಿ ಒಂದು ವರ್ಷವಾಗಿದ್ದ ಅವಧಿ, ನಂತರ 9 ತಿಂಗಳಿಗೆ ಮತ್ತು ಇದೀಗ 6 ತಿಂಗಳಿಗೆ ಇಳಿಕೆಯಾಗಿದೆ.
ಈ ನಡುವೆ, ಗಡೀಪಾರು ಆದೇಶಕ್ಕೆ ಸಂಬಂಧಿಸಿದ ಮಹೇಶ್ ಶೆಟ್ಟಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.







