ನಂದಿಕೂರು, ಮಾ.5: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಯೋ ಡೀಸೆಲ್, ಪಾಮ್ ಆಯಿಲ್ ಹಾಗೂ ಗ್ಲಿಸರಿನ್ ಉತ್ಪಾದನಾ ಘಟಕವಾದ ಮೆಸರ್ಸ್ ಎಂ11 ಎನರ್ಜಿಟ್ರಾನ್ಸಿಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ.
ಕರ್ನಾಟಕ ವಾಟರ್ (ಪ್ರಿವೆನ್ಷನ್ ಆ್ಯಂಡ್ ಕಂಟ್ರೋಲ್ ಆಫ್ ಪೊಲ್ಯೂಶನ್) ಕಾಯ್ದೆಯ ಸೆಕ್ಷನ್ 34ರಡಿ ಈ ಕ್ರಮ ಕೈಗೊಳ್ಳಲಾಗಿದೆ. ನಂದಿಕೂರು ಕೈಗಾರಿಕಾ ಪ್ರದೇಶದ ಪ್ಲಾಟ್ ನಂ.155 ಮತ್ತು 169ರಲ್ಲಿ ಕಾರ್ಯಾಚರಿಸುತ್ತಿದ್ದ ಈ ಘಟಕವು ಕಾಯ್ದೆಯಲ್ಲಿರುವ ಹಲವು ನಿಯಮಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಮಂಡಳಿ ಆದೇಶಿಸಿದೆ ಎಂದು ತಿಳಿದುಬಂದಿದೆ.
ಘಟಕದಿಂದ ಹೊರಬರುತ್ತಿರುವ ದುರ್ವಾಸನೆ ಹಾಗೂ ವಿವಿಧ ರೀತಿಯ ಮಾಲಿನ್ಯದಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪದೊಂದಿಗೆ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ನಡೆದ ಪಲಿಮಾರು ಗ್ರಾಮಸಭೆಯಲ್ಲೂ ಕಂಪೆನಿಯ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು.
ಈ ಸಂಬಂಧ ಗುರ್ಮೆ ಸುರೇಶ್ ಶೆಟ್ಟಿ ಕಂಪೆನಿಯ ಪರಿಸರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸ್ಥಳೀಯರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಘಟಕಕ್ಕೆ ಹಲವು ಬಾರಿ ಭೇಟಿ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು.
ತಜ್ಞರ ವರದಿ ಆಧಾರದಲ್ಲಿ ಘಟಕದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮಂಡಳಿ ಫೆ.18ರಂದು ಆದೇಶ ಹೊರಡಿಸಿದೆ. ಇದರಂತೆ ಕಂಪೆನಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಕೂಡ ಘಟಕದಲ್ಲಿ ಯಾವುದೇ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವಂತೆ ತಿಳಿಸಲಾಗಿದ್ದು, ವಿದ್ಯುತ್ ಸಂಪರ್ಕವನ್ನು ತಕ್ಷಣ ಕಡಿತಗೊಳಿಸಲು ಮೆಸ್ಕಾಂ ಆಡಳಿತ ನಿರ್ದೇಶಕರಿಗೂ ನಿರ್ದೇಶನ ನೀಡಲಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಸೂಚನೆಗಳನ್ನು ಸಂಸ್ಥೆ ಪದೇಪದೇ ಉಲ್ಲಂಘಿಸಿರುವುದಾಗಿ ಹೇಳಲಾಗಿದೆ. ಮಾಲಿನ್ಯಕಾರಕ ತ್ಯಾಜ್ಯ ನೀರನ್ನು ಆವರಣದ ಹೊರಗೆ ಬಿಡದಂತೆ ಸೂಚನೆ ನೀಡಿದ್ದರೂ ಅದನ್ನು ಪಾಲಿಸದೆ ಹೊರಗೆ ಹರಿಸಲಾಗುತ್ತಿತ್ತು. ಅಲ್ಲದೆ ತ್ಯಾಜ್ಯ ನೀರನ್ನು ಆವರಣದೊಳಗೆ ಮುಕ್ತವಾಗಿ ಸಂಗ್ರಹಿಸಿರುವುದು ಮಂಡಳಿಯ ಸ್ಥಳೀಯ ಅಧಿಕಾರಿಗಳು ಪರಿಶೀಲನೆಗೆ ಬಂದ ವೇಳೆ ಪತ್ತೆಯಾಗಿದೆ ಎಂದು ಮಂಡಳಿ ತಿಳಿಸಿದೆ.






