ಬಂಟ್ವಾಳ, ಮಾ. 05: ಫರಂಗಿಪೇಟೆ ಸಮೀಪದ 10ನೇ ಮೈಲ್ಕಲ್ಲು ಬಳಿ ನೇತ್ರಾವತಿ ನದಿಯ ತೀರದಲ್ಲಿ ಆಧಾರ್ ಕಾರ್ಡ್ಗಳ ಗುಚ್ಚ ಪತ್ತೆಯಾಗಿರುವುದು ಕುತೂಹಲ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ಪುದು ಗ್ರಾಮದ ನಿವಾಸಿಗಳ ವಿಳಾಸಗಳಿರುವುದು ಗಮನಕ್ಕೆ ಬಂದಿದ್ದು, ಘಟನೆ ಕುರಿತು ಹಲವು ಪ್ರಶ್ನೆಗಳು ಮೂಡಿವೆ.
ಮಾ. 3ರ ಸಂಜೆ ವೇಳೆಯಲ್ಲಿ ನದಿಯ ತೀರ ಭಾಗದಲ್ಲಿ ನೀರಿನ ಮೇಲೆ ತೇಲುತ್ತಿದ್ದ ಆಧಾರ್ ಕಾರ್ಡ್ಗಳ ಗುಂಪನ್ನು ಸ್ಥಳೀಯ ವ್ಯಕ್ತಿಯೊಬ್ಬರು ಗಮನಿಸಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಅವು ಪುದು ಗ್ರಾಮದ ನಾಗರಿಕರದ್ದೇ ಆಧಾರ್ ಕಾರ್ಡ್ಗಳಾಗಿರುವುದು ಕಂಡುಬಂದಿದೆ. ಆದರೆ ಅವು ನದಿಗೆ ಹೇಗೆ ಬಂದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷರು, ಆಧಾರ್ ಕಾರ್ಡ್ಗಳಲ್ಲಿ ತಿದ್ದುಪಡಿ ಮಾಡಲು ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದರಿಂದ ಅಂಚೆ ಮೂಲಕ ಕಾರ್ಡ್ಗಳು ಬರುವ ನಿರೀಕ್ಷೆಯಲ್ಲಿ ಹಲವರು ಕಾಯುತ್ತಿದ್ದರು. ಕಾರ್ಡ್ಗಳು ತಡವಾದ ಕಾರಣ ಜನರು ಸೈಬರ್ ಕೇಂದ್ರಗಳಲ್ಲಿ ಪ್ರತಿಗಳನ್ನು ಪಡೆಯುತ್ತಿದ್ದರು. ಆದರೆ ಮೂಲ ಕಾರ್ಡ್ಗಳು ಬಂದಿದ್ದರೂ ಅವುಗಳನ್ನು ಸರಿಯಾಗಿ ವಿತರಣೆ ಮಾಡಲಾಗಿಲ್ಲವೆಂದು ಅಂಚೆ ಇಲಾಖೆಯ ವಿರುದ್ಧ ಅವರು ಆರೋಪ ವ್ಯಕ್ತಪಡಿಸಿದ್ದಾರೆ.
ಇದೀಗ ನದಿಯಲ್ಲಿ ಆಧಾರ್ ಕಾರ್ಡ್ಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ. ಸಂಬಂಧಪಟ್ಟ ಅಧಿಕಾರಿಗಳೇ ಕಾರ್ಡ್ಗಳನ್ನು ಗ್ರಾಮಸ್ಥರಿಗೆ ನೀಡದೇ ತ್ಯಜಿಸಿದ್ದಾರೆಯೇ ಅಥವಾ ಬೇರೆ ಯಾವ ಕಾರಣದಿಂದ ಅವು ನದಿಗೆ ಸೇರಿವೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. “ಅಂಚೆ ಮೂಲಕ ಕಾರ್ಡ್ ಬರುತ್ತದೆ ಎಂದು ನಾವು ಕಾಯುತ್ತಿದ್ದೆವು, ಆದರೆ ಕೊನೆಗೆ ನದಿಯಲ್ಲೇ ಸಿಕ್ಕಿವೆ” ಎಂದು ಗ್ರಾಮಸ್ಥರೊಬ್ಬರು ವ್ಯಂಗ್ಯವಾಗಿ ಹೇಳಿದ್ದಾರೆ.






