ಮಾ. 3:ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಆಪ್ತ ಬಂಧು-ಮಿತ್ರರ ಸಮ್ಮುಖದಲ್ಲಿ ನೆರವೇರಿದ ಇವರ ವಿವಾಹ ಸಮಾರಂಭ ಅತ್ಯಂತ ವೈಭವೋಪೇತವಾಗಿತ್ತು ಎನ್ನಲಾಗಿದೆ. ಮದುವೆ ಸಮಾರಂಭಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚವಾಗಿದ್ದು, ವಧೂ-ವರರು ಧರಿಸಿದ್ದ ಚಿನ್ನಾಭರಣಗಳ ಮೌಲ್ಯವೇ ಸುಮಾರು 6ರಿಂದ 7 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ.
ವೈವಾಹಿಕ ಸಂಭ್ರಮದ ನಡುವೆಯೇ ಈ ದಂಪತಿ ಸಮಾಜಮುಖಿ ಕಾರ್ಯಗಳತ್ತ ಗಮನ ಹರಿಸಿರುವುದು ಗಮನಾರ್ಹ. ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ಮೆಚ್ಚುಗೆ ಪಡೆದಿದ್ದ ವಿಜಯ್ ಮತ್ತು ರಶ್ಮಿಕಾ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸಹಾಯ ಹಸ್ತ ಚಾಚಿದ್ದಾರೆ.
ವಿಜಯ್ ದೇವರಕೊಂಡ ಅವರ ‘ದೇವರಕೊಂಡ ಚಾರಿಟೇಬಲ್ ಟ್ರಸ್ಟ್’ ಮೂಲಕ ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆ ವಿಭಾಗದ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ತೀರ್ಮಾನಿಸಲಾಗಿದೆ. ಮದುವೆಯ ಬಳಿಕ ತಮ್ಮ ಪೂರ್ವಜರ ಊರಾದ ತುಮ್ಮನಪೇಟೆಗೆ ಭೇಟಿ ನೀಡಿದ ವೇಳೆ ಈ ಘೋಷಣೆ ಮಾಡಲಾಗಿದೆ. ಈ ಸಂದರ್ಭ ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಕೂಡ ಹಾಜರಿದ್ದರು.
ಇದಕ್ಕೂ ಮುನ್ನ ಈ ಜೋಡಿ ವಿವಿಧ ದೇವಸ್ಥಾನಗಳಲ್ಲಿ ಅನ್ನದಾನ ಕಾರ್ಯ ನಡೆಸಿ, ಅಭಿಮಾನಿಗಳಿಗಾಗಿ ಸಿಹಿ ವಿತರಣೆ ಮಾಡಿತ್ತು. ಇದೀಗ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುವ ಮೂಲಕ ಸಮಾಜಸೇವೆಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.
ಫೆಬ್ರವರಿ 26, 2024ರಂದು ನಡೆದ ಈ ವಿವಾಹ ಸಮಾರಂಭದ ಬಳಿಕ, ದಂಪತಿ ತಮ್ಮ ತೆಲಂಗಾಣದ ಹಳ್ಳಿಯ ಮನೆಯಲ್ಲಿ ಗೃಹಪ್ರವೇಶ ಹಾಗೂ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿಸಿದರು. ಮಾರ್ಚ್ 4ರಂದು ಹೈದರಾಬಾದ್ನ ತಾಜ್ ಕೃಷ್ಣ ಹೋಟೆಲ್ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದ್ದು, ದಕ್ಷಿಣ ಭಾರತೀಯ ಚಿತ್ರರಂಗದ ಗಣ್ಯರು, ಬಾಲಿವುಡ್ ತಾರೆಯರು ಹಾಗೂ ರಾಜಕೀಯ ಪ್ರಮುಖರು ಭಾಗವಹಿಸುವ ನಿರೀಕ್ಷೆಯಿದೆ.
ವೈಯಕ್ತಿಕ ಸಂಭ್ರಮದ ಜೊತೆಗೆ ಸಮಾಜಮುಖಿ ಕಾರ್ಯಗಳ ಮೂಲಕವೂ ಈ ಜೋಡಿ ಗಮನ ಸೆಳೆಯುತ್ತಿದೆ.






