ಕುಂದಾಪುರ, ಮಾ. 3: ಮಾಜಿ ಪ್ರೇಯಸಿ ಹೆಸರಿನಲ್ಲಿ ವಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಸಾಧಿಸಿ ಯುವಕನಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹೊಸಂಗಡಿ ಗ್ರಾಮದ ದಿವ್ಯ ನಾಯ್ಕ ಎಂಬವರು ವಂಚನೆ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದಿವ್ಯ ಅವರ ಮಾವನ ಮಗಳು ಅನುಷಾ ಮತ್ತು ರವೀಂದ್ರ ನಡುವೆ ಹಿಂದೆ ಪ್ರೀತಿಯ ಸಂಬಂಧವಿದ್ದು, ಈ ವಿಷಯ ಮನೆ ಮಂದಿಗೆ ತಿಳಿದ ಬಳಿಕ ಇಬ್ಬರೂ ದೂರವಾಗಿದ್ದರು.
ಈ ಹಿನ್ನೆಲೆ, ಅನುಷಾ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯನ್ನು ದಿವ್ಯ ತಮ್ಮ ವಶಕ್ಕೆ ಪಡೆದು ರವೀಂದ್ರರಿಗೆ ಸಂದೇಶ ಕಳುಹಿಸುತ್ತಿದ್ದಳು ಎನ್ನಲಾಗಿದೆ. ಆದರೆ ಯಾವುದೇ ದೂರವಾಣಿ ಕರೆ ಮಾಡುವುದು ಅಥವಾ ಸ್ವೀಕರಿಸುವುದನ್ನು ತಪ್ಪಿಸುತ್ತಿದ್ದಳು.
ತಮ್ಮ ಮಾಜಿ ಪ್ರೇಯಸಿಯೇ ಸಂದೇಶ ಕಳುಹಿಸುತ್ತಿದ್ದಾಳೆ ಎಂದು ನಂಬಿದ ರವೀಂದ್ರ, ದಿವ್ಯ ಸೂಚಿಸಿದ್ದ ವಿವಿಧ ವ್ಯಕ್ತಿಗಳ ಸ್ಕ್ಯಾನರ್ಗಳಿಗೆ ಒಟ್ಟು ₹1,80,200 ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಅನುಮಾನಗೊಂಡ ರವೀಂದ್ರ, ಅನುಷಾ ಅವರನ್ನು ನೇರವಾಗಿ ಭೇಟಿ ಮಾಡಿದಾಗ ವಂಚನೆಯ ಸಂಗತಿ ಬಹಿರಂಗವಾಗಿದೆ.
ಈ ಸಂಬಂಧ ರವೀಂದ್ರ ಅವರು ನೀಡಿದ ದೂರಿನ ಆಧಾರದಲ್ಲಿ ದಿವ್ಯ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.







