ಸಿದ್ದಾಪುರ, ಮಾ. 2: ವಾಟ್ಸ್ಅಪ್ ಹಾಗೂ ಇನ್ಸ್ಟಾಗ್ರಾಂ ಮೂಲಕ ನಕಲಿ ಗುರುತು ಬಳಸಿ ವ್ಯಕ್ತಿಯಿಂದ ಹಣ ಪಡೆದು ವಂಚಿಸಿದ ಆರೋಪದಲ್ಲಿ ಹೊಸಂಗಡಿ ಗ್ರಾಮದ ಮಹಿಳೆ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಂಗಡಿ ಗ್ರಾಮದ ದಿವ್ಯ (28) ಎಂಬವರು ಅದೇ ಗ್ರಾಮದ ರವೀಂದ್ರ (29) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಹಿಸಿ ಹಣ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೂರು ವರ್ಷಗಳ ಹಿಂದೆ ಹೊಸನಗರ ತಾಲೂಕಿನ ಅನುಷಾ ಎಂಬ ವಿದ್ಯಾರ್ಥಿನಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದು ಓದುತ್ತಿದ್ದ ಸಂದರ್ಭದಲ್ಲಿ ರವೀಂದ್ರನೊಂದಿಗೆ ಸ್ನೇಹ ಬೆಳೆದು ಬಳಿಕ ಪ್ರೀತಿಯಾಗಿ ಮಾರ್ಪಟ್ಟಿತ್ತು. ವಿಷಯ ತಿಳಿದ ಬಳಿಕ ಪೋಷಕರು ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಂತರ ಪ್ರಕರಣ ಇತ್ಯರ್ಥಗೊಂಡಿತ್ತು. ಆ ಅವಧಿಯಲ್ಲಿ ಅನುಷಾ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯನ್ನು ಬಳಿಕ ದಿವ್ಯ ಉಪಯೋಗಿಸುತ್ತಿದ್ದರು ಎಂದು ತಿಳಿದುಬಂದಿದೆ.
2025ರ ಅಕ್ಟೋಬರ್ 24ರಂದು ಅನುಷಾ ಹೆಸರಿನಲ್ಲಿ ರವೀಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಂದೇಶ ಕಳುಹಿಸಲಾಗಿತ್ತು. ಹಳೆಯ ಪರಿಚಯದ ಹಿನ್ನೆಲೆ ರವೀಂದ್ರ ಅವರು ಚಾಟ್ ಪ್ರಾರಂಭಿಸಿದ್ದರು. ಈ ವೇಳೆ ವಿವಿಧ ಕ್ಯೂಆರ್ ಸ್ಕ್ಯಾನರ್ಗಳನ್ನು ಕಳುಹಿಸಿ ಹಣ ಕಳುಹಿಸುವಂತೆ ಮನವಿ ಮಾಡಲಾಗಿದ್ದು, ಒಟ್ಟು ₹1,80,200 ಹಣ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ರವೀಂದ್ರ ಅವರು ಅಮಾಸೆಬೈಲು ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.







