ಉಡುಪಿ, ಫೆ.27; ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಶುಕ್ರವಾರ ನಡೆದಿದೆ. ಯಾವುದೋ ಗಂಭೀರ ಕಾಯಿಲೆಗೆ ತುತ್ತಾಗಿರುವ ವ್ಯಕ್ತಿಯು ಅನ್ನಹಾರ ಇಲ್ಲದೆ ಇಂದ್ರಾಳಿಯ ರೈಲು ನಿಲ್ದಾಣದ ಬಳಿ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಗಮನಿಸಿದ ರೈಲ್ವೆ ಆರ್ ಪಿ ಎಫ್ ಅಧಿಕಾರಿಯರು ಒಳಕಾಡುವರ ಗಮನಕ್ಕೆ ತಂದಿದ್ದರು.
ತಕ್ಷಣ ನೆರವಿಗೆ ಬಂದ ಒಳಕಾಡುವರು ಅಂಬುಲೆನ್ಸ್ ವಾಹನದಲ್ಲಿ ರೋಗಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಮೊದಲಾಗಿ ಗಬ್ಬು ವಾಸನೆಹೊಡೆಯುತ್ತಿದ್ದ ವ್ಯಕ್ತಿಯನ್ನು ಶುಚಿಗೊಳಿಸಿ ದಾಖಲುಪಡಿಸಿದ್ದಾರೆ. ದಾಖಲಿಸಲ್ಪಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿಲ್ಲ ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.







