ಮಂಗಳೂರು, ಫೆ. 28:ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಕೃಷಿಕ ಸುನಿಲ್ ಅವರ ಪುತ್ರ ಸ್ಯಾಂಜೋ ಸುನಿಲ್ (31) ಅವರು ಐರ್ಲೆಂಡ್ನಲ್ಲಿ ಫೆಬ್ರವರಿ 19ರಂದು ನಿಧನರಾಗಿದ್ದು, ಅವರ ಪಾರ್ಥಿವ ಶರೀರವು ಮಾರ್ಚ್ 1 ಅಥವಾ 2ರಂದು ಸ್ವಗ್ರಾಮಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ದಿಲ್ಲಿ ಕಚೇರಿ ಮೂಲಗಳು ತಿಳಿಸಿವೆ.
ಐರ್ಲೆಂಡ್ನ ಡಬ್ಲಿನ್ ನಗರದ ಫಿಂಗ್ಲಾಸ್ ಪ್ರದೇಶದ ಚಾರ್ಲ್ಸ್ ಟೌನ್ನಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದ ಸ್ಯಾಂಜೋ ಅವರ ಮೃತದೇಹವು ಅವರು ವಾಸಿಸುತ್ತಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಸಂಬಂಧ ಮರಣೋತ್ತರ ಪರೀಕ್ಷೆ ಫೆಬ್ರವರಿ 20ರಂದು ನೆರವೇರಿಸಲ್ಪಟ್ಟಿದ್ದು, ವರದಿ ಹಾಗೂ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಅಗತ್ಯ ನಿರಾಕ್ಷೇಪಣ ಪತ್ರವು ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲು ಬೇಕಾದ ಕ್ರಮಗಳನ್ನು ಸ್ಥಳೀಯ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ಸಂಸದರ ಕಚೇರಿಯಿಂದ ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.







