ಉಡುಪಿ, ಫೆ. 23: ಕುಂತಲನಗರದ ದೇವಳಗುಜ್ಜಿ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಅಳವಡಿಸಿದ್ದ ಬೋನಿನಲ್ಲಿ ರವಿವಾರ (ಫೆ.22) ನಸುಕಿನ ವೇಳೆಯಲ್ಲಿ ಚಿರತೆಯೊಂದು ಸೆರೆಯಾಗಿದೆ. ಕಳೆದ ಎರಡು ವಾರಗಳಿಂದ ಈ ಭಾಗದಲ್ಲಿ ಚಿರತೆ ಸಂಚರಿಸುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಬೋನು ಇಟ್ಟಿತ್ತು.
ಬೆಳಗಿನ ಜಾವ ಆಹಾರ ಹುಡುಕುತ್ತ ಬಂದ ಚಿರತೆ ಬೋನಿಗೆ ಸಿಕ್ಕಿದ್ದು, ಮಾಹಿತಿ ತಿಳಿದು ಉಡುಪಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಯಿತು.
ಸೆರೆಯಾದುದು ಅಂದಾಜು ಒಂದು ವರ್ಷದ ಹೆಣ್ಣು ಚಿರತೆ ಎಂದು ತಿಳಿದುಬಂದಿದ್ದು, ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಅದನ್ನು ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮೊಹಮ್ಮದ್ ಜುನೇದ್ ಅಖರ್, ಶಿವಾನಂದ್, ಗಸ್ತು ಅರಣ್ಯ ಪಾಲಕ ಶ್ರೀನಿವಾಸ್ ಜೋಗಿ ಹಾಗೂ ಅಕ್ಷಯ ಶೇಟ್ ಭಾಗವಹಿಸಿದ್ದರು







