ಕುಂದಾಪುರ, ಫೆ. 23: ಸುಮಾರು ಆರು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಹೇರಿಕುದ್ರು ಸೇತುವೆ ಮೇಲೆ ನಡೆದಿದ್ದ ಬಸ್ ಅಪಘಾತ ಪ್ರಕರಣದಲ್ಲಿ ಕೆಎಸ್ಆರ್ಟಿಸಿ ಚಾಲಕ ಸಂಜಯ ಶಾನುಭಾಗ್ಗೆ ನ್ಯಾಯಾಲಯ ದಂಡದ ಶಿಕ್ಷೆ ವಿಧಿಸಿದೆ.
2019ರ ಜುಲೈ 30ರ ಬೆಳಿಗ್ಗೆ, ಬಸ್ಸನ್ನು ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಸಂಜಯ ಶಾನುಭಾಗ್, ಎದುರುಗಡೆಯಿಂದ ಬರುತ್ತಿದ್ದ ವಾಹನವನ್ನು ಕಂಡು ತಕ್ಷಣ ಬ್ರೇಕ್ ಹೇರಿದ್ದಾರೆ. ಇದರ ಪರಿಣಾಮವಾಗಿ ಪ್ರಯಾಣಿಕರಾದ ನಾಗಮ್ಮ, ಲಲಿತಾ, ರೇಣುಕಾ ಹಾಗೂ ಪುಟಾಣಿ ಮಕ್ಕಳು ಆರಾಧ್ಯ ಮತ್ತು ಐಶ್ವರ್ಯ ಬಸ್ಸಿನೊಳಗೆ ಬಿದ್ದು ಗಾಯಗೊಂಡಿದ್ದಾರೆ.
ಅಪಘಾತದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಚಾಲಕ ಸ್ಥಳದಿಂದ ತೆರಳಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆ ಸಮಯದಲ್ಲಿ ಎಸ್ಐ ಪುಷ್ಪಾ ತನಿಖೆ ನಡೆಸಿ, ಚಾಲಕನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಅವರು ಆರೋಪಿಗೆ ದಂಡದ ಶಿಕ್ಷೆ ಪ್ರಕಟಿಸಿದರು.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ವಾದ ಮಂಡಿಸಿದರು.







