ಉಡುಪಿ, ಫೆ. 23: ನಗರದಲ್ಲಿ ವಾಹನ ದಟ್ಟಣೆ ನಡುವೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆತಂಕ ಸೃಷ್ಟಿಸಿದೆ. ನಗರದ ಕಲ್ಸಂಕ ಜಂಕ್ಷನ್ನಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳೀಯ ಪೊಲೀಸರ ಸಮಯೋಚಿತ ಕ್ರಮದಿಂದ ಭಾರೀ ಅನಾಹುತ ತಪ್ಪಿದೆ.
ಗದಗ ಮೂಲದ ಯುವಕನೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಕೈಯಲ್ಲಿ ಪೆಟ್ರೋಲ್ ಬಾಟಲ್ ಹಿಡಿದು ಸಂಚರಿಸುತ್ತಿದ್ದ ಅವನನ್ನು ಸಂಚಾರಿ ಪೊಲೀಸರು ಹಲವು ಬಾರಿ ತಡೆದು ಬಾಟಲ್ ಕಸಿದುಕೊಂಡಿದ್ದರು. ಆದರೂ ಮತ್ತೆ ಪೆಟ್ರೋಲ್ ತರಿಸಿಕೊಂಡು ಮೈ ಮೇಲೆ ಸುರಿದುಕೊಂಡಿರುವುದಾಗಿ ವರದಿಯಾಗಿದೆ.
ರಸ್ತೆಯ ಮಧ್ಯೆ ನಡೆದ ಈ ಘಟನೆಯಿಂದ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬ ಕಲಹವೇ ಈ ಕೃತ್ಯಕ್ಕೆ ಕಾರಣ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಧಾವಿಸಿದ ಉಡುಪಿ ನಗರ ಪೊಲೀಸರು ಯುವಕನನ್ನು ಸುರಕ್ಷಿತವಾಗಿ ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರು ಪೊಲೀಸರ ಸಮಯಪ್ರಜ್ಞೆಯನ್ನು ಮೆಚ್ಚಿದ್ದಾರೆ. ಬಳಿಕ ಯುವಕನನ್ನು ಗದಗ ಜಿಲ್ಲೆಗೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.







