ಕಾರ್ಕಳ, ಫೆ. 17: ಸರ್ವಧರ್ಮೀಯರಿಗೂ ಪರಮಾತ್ಮನು ಒಬ್ಬನೇ ಆಗಿದ್ದಾನೆ ಎಂದು ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮೀ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಮಾತ್ಮನನ್ನು ವಿವಿಧ ಧರ್ಮಗಳವರು ವಿವಿಧ ಹೆಸರಿನಿಂದ ಕರೆಯುತ್ತಿದ್ದರೂ ಆತನು ಒಬ್ಬನೇ ಎಂಬ ಸತ್ಯವನ್ನು ಅರಿಯಬೇಕು ಎಂದು ತಿಳಿಸಿದರು. ಧರ್ಮಗ್ಲಾನಿಯ ಈ ಸಂದರ್ಭದಲ್ಲಿ ಪರಮಾತ್ಮನು ಧರೆಗೆ ಅವತರಿಸಿ ಪ್ರಜಾಪಿತ ಬ್ರಹ್ಮನ ಶರೀರದ ಮೂಲಕ ಈಶ್ವರೀಯ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದ್ದಾನೆ ಎಂದು ಹೇಳಿದರು.

ಇಂದು ಈಶ್ವರೀಯ ವಿಶ್ವ ವಿದ್ಯಾಲಯವು 140ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಸೇವಾ ಕೇಂದ್ರಗಳ ಮೂಲಕ ಮನಶ್ಶಾಂತಿ ಹಾಗೂ ವಿಶ್ವಶಾಂತಿ ಕಾರ್ಯವನ್ನು ನಿರ್ವಹಿಸುತ್ತಿದೆ. ಸಂಸ್ಥೆಗೆ ವಿಶ್ವಶಾಂತಿ ಕಾರ್ಯಕ್ಕಾಗಿ ವಿಶ್ವಸಂಸ್ಥೆಯಿಂದ ಸಲಹೆಗಾರ ಸಂಸ್ಥೆಯ ಮಾನ್ಯತೆ ದೊರೆತಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಮೂಲಕ ಲಕ್ಷಾಂತರ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಸಾರ್ವಜನಿಕರು ಉಚಿತವಾಗಿ ನೀಡಲಾಗುತ್ತಿರುವ ರಾಜಯೋಗ ಶಿಕ್ಷಣವನ್ನು ಪಡೆದು ಜೀವನದಲ್ಲಿ ಶಾಂತಿ ಹಾಗೂ ಸತ್ಪ್ರವೃತ್ತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿ.ಕೆ. ಶಾಂತಾ ಸ್ವಾಗತಿಸಿದರು. ಬಿ.ಕೆ. ಗಾಯತ್ರಿ ಧನ್ಯವಾದ ಅರ್ಪಿಸಿದರು. ಬಿ.ಕೆ. ವರದರಾಯ ಪ್ರಭು ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ
-ಅರುಣ್ ಭಟ್ ಕಾರ್ಕಳ







