ಕಾರ್ಕಳ, ಫೆ. 17:ಶಿವತಿಕೆರೆ ಗ್ರಾಮದ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಂಪ್ರತಿ ನಡೆಯುವ ಜಾತ್ರೋತ್ಸವವು ಫೆಬ್ರವರಿ 12ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡು, ಫೆಬ್ರವರಿ 15ರಂದು ಮಹಾಶಿವರಾತ್ರಿ ಪ್ರಯುಕ್ತ ಭಕ್ತಿಭಾವಪೂರ್ಣವಾಗಿ ಸಂಪನ್ನಗೊಂಡಿತು.
ಬ್ರಹ್ಮಶ್ರೀ ಮುರಳೀಧರ ತಂತ್ರಿ ಎಡಪದವು ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ತೋರಣ ಮುಹೂರ್ತ, ನವಕಪ್ರಧಾನ ಹೋಮ, ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ಕಟ್ಟೆ ಪೂಜೆ ಹಾಗೂ ಭೂತಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಮಹಾಶಿವರಾತ್ರಿ ದಿನ ಸಹಸ್ರ ಬಿಲ್ವಾರ್ಚನೆ, ಭಜನಾ ಉತ್ಸವ, ಬಲಿ ಪಲ್ಲಕ್ಕಿ ಉತ್ಸವ, ಚಂದ್ರಮಂಡಲ ರಥೋತ್ಸವ, ವಸಂತ ಕಟ್ಟೆ ಪೂಜೆ, ಓಕುಳಿ, ಅವಭೃತ ಹಾಗೂ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಜರುಗಿತು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಅರ್ಚಕ ರಾಜೇಂದ್ರ ಭಟ್, ಆಡಳಿತ ಮೊಕ್ತೇಸರ ಚಂದ್ರಶೇಖರ ಶೆಟ್ಟಿ, ಗೌರವಾಧ್ಯಕ್ಷ ಸುಂದರ ದೇವಾಡಿಗ, ಸುರೇಂದ್ರ ಶೆಟ್ಟಿ, ಸಂಜೀವ ದೇವಾಡಿಗ, ಸುದರ್ಶನ ಭಂಡಾರಿ, ಬಾಲಕೃಷ್ಣ ದೇವಾಡಿಗ, ಕೆ.ಬಿ. ಗುರುಪ್ರಸಾದ್ ರಾವ್, ಶ್ರೀಮತಿ ಜಯಂತಿ ಎನ್. ದೇವಾಡಿಗ, ಸೇವಾ ಸಮಿತಿ ಅಧ್ಯಕ್ಷ ನಾಗೇಶ್ ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಅರುಣ ದಿನೇಶ್ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ
-ಅರುಣ್ ಭಟ್ ಕಾರ್ಕಳ







