ಚಿಕ್ಕಮಗಳೂರು, ಫೆ. 16: ಕಾಫಿ ನಾಡಿನಲ್ಲಿ ಕಾಡಾನೆಗಳ ಅಟ್ಟಹಾಸ ಮತ್ತೆ ಬಲಿ ಪಡೆದಿದೆ. ತೋಟದ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನೊಬ್ಬ ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿರುವಳ್ಳಿ ಗ್ರಾಮದ ಯಲ್ಲಪ್ಪ (45) ಮೃತ ದುರ್ದೈವಿ. ಕಳೆದ ಕೆಲವು ತಿಂಗಳಿನಿಂದ ಚಿಕ್ಕಮಗಳೂರು ಭಾಗದಲ್ಲಿ ಗಾರೆ ಹಾಗೂ ತೋಟದ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಸಂಜೆ ವೇಳೆ ಕೆಲಸ ಮುಗಿಸಿ ನಾಗೇಶ್ ಗೌಡರ ತೋಟದ ದಾರಿಯಲ್ಲಿ ನಡೆದು ಶ್ರೀಧರ್ ಗೌಡರ ತೋಟದಲ್ಲಿದ್ದ ಲೈನ್ ಮನೆಯನ್ನು ಸೇರುವ ಸಂದರ್ಭ ಏಕಾಏಕಿ ಕಾಡಾನೆ ಎದುರಾದಿದೆ. ತಪ್ಪಿಸಿಕೊಳ್ಳುವ ಮುನ್ನವೇ ಆನೆ ದಾಳಿ ನಡೆಸಿ ಯಲ್ಲಪ್ಪ ಅವರನ್ನು ತುಳಿದು ಹಾಕಿದೆ. ಗಂಭೀರ ಗಾಯಗಳಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ತೋಟ ಕಾರ್ಮಿಕರು ಮತ್ತು ರೈತರು ಆತಂಕದ ನಡುವೆ ಕೆಲಸ ಮಾಡುತ್ತಿದ್ದಾರೆ. ಕಾಡಾನೆಗಳನ್ನು ತಕ್ಷಣವೇ ಹಿಮ್ಮೆಟ್ಟಿಸಲು ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ..







