ಕಾಪು, ಫೆ. 16: ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸ್ಥಾಪಕರಾದ ಕೆ.ಪಿ. ಆಚಾರ್ಯ (78) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.
ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ ದಿವಂಗತ ಭಾಸ್ಕರ ಶೆಟ್ಟಿಯವರ ಆಪ್ತರಾಗಿದ್ದ ಅವರು, ಸುಮಾರು 30 ವರ್ಷಗಳ ಹಿಂದೆ ಅನಂತರಾಜ ಚಾರಿಟೇಬಲ್ ಟ್ರಸ್ಟ್ ಮೂಲಕ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಅನ್ನು ಆರಂಭಿಸಿದ್ದರು. ಕಾಪು ತಾಲೂಕಿನಲ್ಲಿ ಐಸಿಐಸಿಐ ಪಠ್ಯಕ್ರಮದ ಪ್ರಥಮ ಶಿಕ್ಷಣ ಸಂಸ್ಥೆಯಾಗಿ ಆರಂಭವಾದ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಶೇ.80 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರಿಗೆ ಉಚಿತ ಶಿಕ್ಷಣ ನೀಡುವ ಮೂಲಕ ‘ಎಲ್ಲರ ಪ್ರೀತಿಯ ಅಜ್ಜ’ ಎಂಬ ಹೆಸರನ್ನು ಪಡೆದಿದ್ದರು.
ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವರ ಪರಮ ಭಕ್ತರಾಗಿದ್ದ ಅವರು, ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನ, ಕಲ್ಯಾ ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನ, ಶ್ರೀ ಕಲ್ಕುಡ ದೈವಸ್ಥಾನ ಹೀಗೆ ಕಾಪು ಸಾವಿರ ಸೀಮೆಯ ಎಲ್ಲಾ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಪ್ರಧಾನ ಮಾರ್ಗದರ್ಶಕರಾಗಿದ್ದ ಅವರು ಸಮಾಜ ಸೇವೆಯಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದರು.
ಕಾಪುವಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳು, ರಾಜ್ಯ ಮಟ್ಟದ ಪ್ರತಿಭಾ ಸ್ಪರ್ಧೆ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರಲು ನಿರಂತರವಾಗಿ ಶ್ರಮಿಸಿದ್ದರು.
ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಸಹ ಸಂಚಾಲಕಿ ಶ್ವೇತಾ ಆಚಾರ್ಯ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸಂಜೆ 2 ಗಂಟೆಯವರೆಗೆ ಕಾಪು ವಿದ್ಯಾನಿಕೇತನ ಶಿಕ್ಷಣ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು. ಸಂಜೆ 4 ಗಂಟೆಗೆ ಉಡುಪಿ ಬೀಡಿನ ಗುಡ್ಡೆಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.







