ಕಾರ್ಕಳ: ಇಲ್ಲಿನ ಅನಂತಪದ್ಮನಾಭ ದೇವಸ್ಥಾನಕ್ಕೆ ಆಗಮಿಸಿದ ಸದ್ಯೋಜಾತ ಶಂಕರಾಶ್ರಮದ ಗುರುಗಳು ದೇವರ ದರ್ಶನ ಪಡೆದು ಅಪಾರ ಸಂತೋಷ ವ್ಯಕ್ತಪಡಿಸಿದರು.
ಗುರುಗಳು ಕ್ರಮವಾಗಿ ಪದ್ಮನಾಭ, ದಾಮೋದರ, ಸಂಕರ್ಷಣ ಹಾಗೂ ವಾಸುದೇವ ರೂಪಗಳಲ್ಲಿ ಭಗವಂತನ ದರ್ಶನವನ್ನು ಪಡೆದರು. ಪಾಂಚರಾತ್ರ ಸಂಹಿತೆಯ ಕೇಶವಾದಿಗಳ ಚಿಂತನೆ ನಡೆಸುತ್ತಾ, ಭಾರತದೇಶದಲ್ಲೇ ವಿಶಿಷ್ಟ ರೂಪಗಳಾದ ಪದ್ಮಚಕ್ರಗದಾಶಂಖಧರ ಪದ್ಮನಾಭ, ಶಂಖಗದಾಚಕ್ರಪದ್ಮಧರ ದಾಮೋದರ, ಶಂಖಪದ್ಮಚಕ್ರಗದಾಧರ ಸಂಕರ್ಷಣ ಮತ್ತು ಶಂಖಚಕ್ರಪದ್ಮಗದಾಧರ ವಾಸುದೇವರ ರೂಪಗಳನ್ನು ಧ್ಯಾನಿಸಿದರು.
ತಮ್ಮ ಪ್ರವಚನದಲ್ಲಿ ಭಗವಂತನ ಲಕ್ಷೀಯ ಗುಣಗಳನ್ನು ಕೊಂಡಾಡಿದ ಗುರುಗಳು, ಸದಾ ರಮೆಯ ಕೃಪಾದೃಷ್ಟಿಯಿಂದ ಸಂತುಷ್ಟನಾಗಿರುವ ಭಗವಂತನು ಪ್ರಪಂಚಕ್ಕೆ ಮಂಗಳವನ್ನು ನೀಡುತ್ತಾನೆ ಎಂದು ಹೇಳಿದರು.
ಇದೇ ವೇಳೆ “ಅರೂಕ್ಷಾ ಧರ್ಮಕಾಮಾಸ್ಸ್ಯು:” ಎಂಬ ಉಪನಿಷತ್ ವಾಕ್ಯದಂತೆ ನಮ್ಮ ಜೀವನ ಧರ್ಮಮಾರ್ಗದಲ್ಲಿ ಸಾಗಬೇಕು ಎಂದು ಭಕ್ತಜನರಿಗೆ ಸಜ್ಜನ ಜೀವನಕ್ರಮದ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಅನೇಕ ಭಕ್ತರು ಉಪಸ್ಥಿತರಿದ್ದು ಆಶೀರ್ವಾದ ಪಡೆದರು.







