ಉಡುಪಿ, ಫೆ. 14: .ಜಿಲ್ಲೆಯ ಕಾರ್ಮಿಕ ವರ್ಗದ ದೀರ್ಘಕಾಲದ ಕನಸಾಗಿದ್ದ ಸುಸಜ್ಜಿತ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಸ್ತುತ ಮುಂದುವರಿದಿದೆ. ಈ ಹಿಂದೆ ಟೆಂಡರ್ ಆಹ್ವಾನಿಸಲ್ಪಟ್ಟಿದ್ದರೂ ಯಾವುದೇ ಗುತ್ತಿಗೆದಾರರು ಆಸಕ್ತಿ ತೋರದ ಹಿನ್ನೆಲೆ ಮರು ಟೆಂಡರ್ ಕರೆದಿದ್ದು, ಇದೀಗ ಅಗತ್ಯ ಕ್ರಮಗಳು ಪೂರ್ಣಗೊಂಡಿವೆ.
ಸದ್ಯದಲ್ಲಿಯೇ ಮುಂದಿನ ಪ್ರಕ್ರಿಯೆಗಳು ನೆರವೇರಲಿವೆ.
ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಕಾರ್ಮಿಕ ಸಚಿವಾಲಯದ ಮೂಲಕ ಮಂಜೂರಾಗಿರುವ 100 ಹಾಸಿಗೆಗಳ ಸಾಮರ್ಥಯದ ಬೃಹತ್ ಇಎಸ್ಐ ಆಸ್ಪತ್ರೆ ಹಾಗೂ ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 32 ಸಿಬಂದಿಗೆ ಪ್ರತ್ಯೇಕ ವಸತಿ ಸಂಕೀರ್ಣ ಇದರಲ್ಲಿರಲಿದೆ. ಸುಮಾರು 150 ಕೋ.ರೂ.ವೆಚ್ಚದ ಈ ಯೋಜನೆ 5.21 ಎಕರೆ ಸ್ಥಳದಲ್ಲಿ ನಿರ್ಮಾಣಗೊಳ್ಳಲಿದೆ.
ಹಲವರಿಗೆ ಅನುಕೂಲ
ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಇಎಸ್ಐ ಸೌಲಭ್ಯ ಹೊಂದಿದ್ದರೂ, ಉನ್ನತ ಚಿಕಿತ್ಸೆಗಾಗಿ ಮಂಗಳೂರು ಅಥವಾ ದೂರದ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಬ್ರಹ್ಮಾವರದಲ್ಲಿ ಆಸ್ಪತ್ರೆ ನಿರ್ಮಾಣ ವಾಗುತ್ತಿರುವುದರಿಂದ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಭಾಗದ ಸಾವಿರಾರು ಕೈಗಾರಿಕಾ ಕಾರ್ಮಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಗುಣಮಟ್ಟದ ಚಿಕಿತ್ಸೆ ಹತ್ತಿರದಲ್ಲಿಯೇ ಸಿಗಲಿದೆ. ವಿಶೇಷವಾಗಿ ಹೆರಿಗೆ ಸೌಲಭ್ಯ, ಶಸ್ತ್ರಚಿಕಿತ್ಸೆ ಹಾಗೂ ತುರ್ತು ನಿಗಾ ಘಟಕಗಳು ಇಲ್ಲಿ ಲಭ್ಯವಿರಲಿವೆ.
ಶೀಘ್ರದಲ್ಲಿಯೇ ಶಂಕುಸ್ಥಾಪನೆ
ಪ್ರಸ್ತುತ ಟೆಂಡರ್ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ತಾಂತ್ರಿಕ ಪ್ರಕ್ರಿಯೆಗಳು ಮುಗಿದ ತತ್ಕ್ಷಣವೇ ಕಾಮಗಾರಿ ಆರಂಭವಾಗಲಿದೆ. ಜನಪ್ರತಿನಿಧಿಗಳ ನಿರಂತರ ಶ್ರಮ ಹಾಗೂ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ. ಈ ಆಸ್ಪತ್ರೆಯು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು. ವಾರಂಬಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಈ ಬೃಹತ್ ಯೋಜನೆ ಸಾಕಾರ ಗೊಳ್ಳುತ್ತಿರುವುದು ಸ್ಥಳೀಯವಾಗಿಯೂ ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗಲಿದೆ. ಕಾಮಗಾರಿ ಅವಧಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದೆ. ಆಸ್ಪತ್ರೆ ಆರಂಭವಾದ ಅನಂತರವೂ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬಂದಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿದೆ.
ಹಲವು ವರ್ಷಗಳ ಬೇಡಿಕೆಯಾಗಿದ್ದ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿ ಮತ್ತೂಮೆ~¾ ಟೆಂಡರ್ ಆಹ್ವಾನಿಸಿ ಎಲ್ಲ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಮೂಲಕ ಜನರ ಆರೋಗ್ಯ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಉದ್ದೇಶ ಹೊಂದಲಾಗಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಂಸದರು






