ಬೆಳ್ತಂಗಡಿ :ಫೆಬ್ರವರಿ 10:ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅಪಹರಣ ಯತ್ನವಾಗಿದೆ ಎಂದು ಆರೋಪಿಸಿದ್ದ 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೇ ಈ ಘಟನೆಯನ್ನು ನಾಟಕೀಯವಾಗಿ ರೂಪಿಸಿದ್ದಾಳೆ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕಾಲೇಜಿಗೆ ಹೋಗುವ ವೇಳೆ ಕಾರಿನಲ್ಲಿ ಬಂದ ಮೂವರು ಮಾಸ್ಕ್ ಧರಿಸಿದ ದುಷ್ಕರ್ಮಿಗಳು ಚೂರಿ ತೋರಿಸಿ ತನ್ನನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಬಾಲಕಿ ದೂರಿದ್ದಳು. ಈ ವೇಳೆ ಕೈಗೆ ಗಾಯವಾಗಿದೆ ಎಂದು ಹೇಳಿಕೊಂಡಿದ್ದಳು. ಈ ಆರೋಪದಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಭಾರೀ ಆತಂಕ ಉಂಟಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಆದರೆ ತನಿಖೆಯಲ್ಲಿ ಬಾಲಕಿ ತಾನೇ ಬ್ಲೇಡ್ ಬಳಸಿ ಕೈಗೆ ಗಾಯ ಮಾಡಿಕೊಂಡು, ಅಪಹರಣದ ಸುಳ್ಳು ಕಥೆ ಕಟ್ಟಿದ್ದಾಳೆ ಎಂಬುದು ಬಹಿರಂಗವಾಗಿದೆ. ಮಂಗಳೂರಿನ ಕಾಲೇಜಿಗೆ ಸೇರಬೇಕೆಂಬ ಆಸೆಯಿಂದ ಕಿಡ್ನಾಪ್ ನಾಟಕವಾಡಿದ್ದೆ ಎಂದು ಬಾಲಕಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾಳೆ.
ಇನ್ನೂ, ಬ್ಯಾಗ್ನಲ್ಲಿದ್ದ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿ, ಬ್ಯಾಗ್ ಅನ್ನು ರಸ್ತೆಯಲ್ಲಿ ಬಿಸಾಕಿದ್ದಳು. ಸ್ಕೂಟಿಯನ್ನು ನಿಲ್ಲಿಸಿ ಗಾಯ ಮಾಡಿಕೊಂಡು ಅಪಹರಣದ ದೃಶ್ಯ ಸೃಷ್ಟಿಸಲು ಯತ್ನಿಸಿದ್ದಾಳೆ. ಆರಂಭದಲ್ಲಿ ಸ್ಥಳೀಯರು ಹಾಗೂ ಕುಟುಂಬಸ್ಥರು ಬಾಲಕಿ ಹೇಳಿದ್ದನ್ನು ನಂಬಿದ್ದರು. ಆದರೆ ಪೊಲೀಸರು ನಡೆಸಿದ ಆಳವಾದ ತನಿಖೆಯಿಂದ ಕೊನೆಗೂ ಸತ್ಯ ಹೊರಬಂದಿದೆ.
ಈ ಘಟನೆಯಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದು, ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.






