ಉಪ್ಪುಂದ ಫೆ. 03 ; ಕೆರ್ಗಾಲು ಗ್ರಾಮದ ಮೊಗೇರಿಯಲ್ಲಿ ಫೆ.2ರಂದು ಜಾನುವಾರುಗಳ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಜಾನುವಾರುಗಳಿಗೆ ದಾಸ್ತಾನು ಮಾಡಿಟ್ಟಿದ್ದ ಸುಮಾರು 15 ಸಾವಿರಕ್ಕೂ ಹೆಚ್ಚು ಒಣ ಹುಲ್ಲುಗಳು ಹಾಗೂ ಕೊಟ್ಟಿಗೆ ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆ ನಡೆದ ವೇಳೆ ಕೊಟ್ಟಿಗೆಯಲ್ಲಿದ್ದ 15 ಜಾನುವಾರುಗಳನ್ನು ಸಮಯಕ್ಕೆ ಸರಿಯಾಗಿ ರಕ್ಷಣೆ ಮಾಡಲಾಗಿದೆ.
ಫೆ.2ರಂದು ಮಧ್ಯಾಹ್ನ ಮೊಗೇರಿ ನಿವಾಸಿ ಶಂಕರನಾರಾಯಣ ಭಟ್ ಅವರ ಮನೆಯ ಕೊಟ್ಟಿಗೆಯಲ್ಲಿರುವ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ದೊಡ್ಡಮಟ್ಟದಲ್ಲಿ ಹೊಗೆ ಆವರಿಸಿತ್ತು. ಅಕ್ಕಪಕ್ಕದ ಮನೆಯವರು ಇದನ್ನು ಗಮನಿಸಿ ಧಾವಿಸಿದರು ಅಷ್ಟರಲ್ಲಿ ಬೆಂಕಿ ಪೂರ್ಣ ಪ್ರಮಾಣದಲ್ಲಿ ಆವರಿಸಿಕೊಂಡಿತ್ತು. ನೋಡು ನೋಡುತ್ತಿದ್ದಂತೆ ಅಂದಾಜು ರೂ. 2ಲಕ್ಷ ಮೌಲ್ಯದ ಒಣ ಹುಲ್ಲುಗಳು ನಾಶವಾಯಿತು. ಕೊಟ್ಟಿಗೆ ಹಾಕಲಾಗಿರುವ ತಗಡಿನ ಶಿಟ್ ಸುಟ್ಟು ಹೋಗಿ ಸುಮಾರು 5ಲಕ್ಷಕ್ಕು ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ತಪ್ಪಿದ ದುರಂತ
ಶಂಕರನಾರಾಯಣ ಭಟ್ ಅವರು ಹೈನುಗಾರಿಕೆಯನ್ನು ನಡೆಸಿಕೊಂಡು ಬರುತ್ತಿದ್ದು ಅವರು ಮನೆಯ ಕೊಟ್ಟಿಗೆಯಲ್ಲಿ 15ಜಾನುವಾರುಗಳು ಇದ್ದವು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವಾಗ ಮನೆಯವರು, ಸ್ಥಳೀಯರು ಒಟ್ಟುಗೂಡಿ ಜಾನುವಾರುಗಳ ಹಗ್ಗ ತೆಗೆದು ಹೊರಗೆ ಬಿಡಲು ಯಶಸ್ವಿಯಾದರು ಸ್ವಲ್ಪ ತಡವಾಗಿದ್ದರು ಕೂಡ ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗುತ್ತಿತ್ತು. ಇನ್ನು ಬೆಂಕಿಯ ಕೆನ್ನಾಲಿಗೆ ಮನೆಗೆ ತಗಲದಂತೆ ಎಚ್ಚರಿಕೆ ವಹಿಸಿದ್ದರಿಂದ ಭಾರೀ ಅವಘಡ ಹಾಗೂ ನಷ್ಟ ತಪ್ಪಿಸಲು ಸಾಧ್ಯವಾಯಿತು ಎನ್ನುತ್ತಾರೆ ಸ್ಥಳೀಯರು.
ಅಗ್ನಿ ಶಾಮಕ ದಳದ ತಂಡದವರು ಹಾಗೂ ಸ್ಥಳೀಯ ಜನರ ಸಹಕಾರದಿಂದ ಬೆಂಕಿ ಹತೋಟಿಗೆ ತಂದರು ಸಹ ಹುಲ್ಲುಗಳು ಸುಟ್ಟು ಕರಕಲಾಗಿದೆ.
ನೂರಾರು ಸ್ಥಳೀಯರು, ಬೈಂದೂರು ಅಗ್ನಿ ಶಾಮಕ ದಳದ ಬೆಂಕಿ ನಂದಿಸಲು ಶ್ರಮಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ






