ಉಡುಪಿ:ನವೆಂಬರ್ 25:ಬೀಡಿ ಕಾರ್ಮಿಕರ ಕನಿಷ್ಠ ಕೂಲಿ, ತುಟ್ಟಿ ಭತ್ಯೆ ನಿರಾಕರಿಸಿದ ಬೀಡಿ ಮಾಲಕರ ವಿರುದ್ಧ ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಅನಿರ್ಧಿಷ್ಟಾವಧಿ ಧರಣಿ ಉದ್ಘಾಟಿಸಿದ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಮಾತನಾಡಿ: ಕರ್ನಾಟಕ ಸರ್ಕಾರ ಬೀಡಿ ಕಾರ್ಮಿಕರಿಗೆ 2018 ಮತ್ತು 2024 ಕನಿಷ್ಠ ಕೂಲಿ ಪ್ರಕಟಣೆ ಮಾಡಿದರೂ ಬೀಡಿ ಮಾಲಕರು ಬಡ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ, ತುಟ್ಟಿ ಭತ್ಯೆ ಕೊಡದೇ ವಂಚಿಸಿದ್ದಾರೆ.
ಬೀಡಿ ಕಾರ್ಮಿಕರು ಹಲವು ಬಾರಿ ಹೋರಾಟಗಳನ್ನು ನಡೆಸಿ ಸರ್ಕಾರಕ್ಕೆ ಮನವಿ ನೀಡಿದರೂ ಸರ್ಕಾರ ಬೀಡಿ ಮಾಲೀಕರ ಮೇಲೆ ಕ್ರಮವಹಿಸಿಲ್ಲ ಇದು ಮಾಲಕರು ಹಾಗೂ ಸರಕಾರ ಜಂಟಿಯಾಗಿ ಕಾರ್ಮಿಕರಿಗೆ ಮಾಡಿದ ದ್ರೋಹ ಎಂದು ಹೇಳಿದರು.
ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ ತುಟ್ಟಿ ಭತ್ತೆ ಸೇರಿ ರೂ 301.98 ರೂ ನೀಡಬೇಕು ಎಂದು ರಾಜ್ಯ ಸರ್ಕಾರ ನಿಗದಿಪಡಿಸಿದರೂ ಮಾಲಕರು ನೀಡಿಲ್ಲ ಆದುದರಿಂದ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಸಂಘಟನೆ ಹಾಗೂ ಬೀಡಿ ಮಾಲಕರ ಜೊತೆ ಜಂಟಿ ಸಭೆ ನಡೆಸಿ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುರೇಶ ಕಲ್ಲಾಗರ ಮಾತನಾಡಿ:ಬೀಡಿ ಮಾಲಕರು ಸರ್ಕಾರ ಮತ್ತು ಕಾನೂನಿಗಿಂತ ದೊಡ್ಡ ವ್ಯಕ್ತಿಗಳಾಗಿ ದ್ದರಿಂದಲೇ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ಕರಾವಳಿ ಜಿಲ್ಲೆಗಳ ಶಾಸಕರು, ಜಿಲ್ಲಾಡಳಿತ ಬಡ ಬೀಡಿ ಕಾರ್ಮಿಕರ ಪರವಾಗಿ ನಿಲ್ಲದೇ ಮಾಲಿಕರ ಜೊತೆ ನಿಂತಿರುವುದರಿಂದಲೇ ಕಾರ್ಮಿಕರ ಬೆವರಿನ ಪಾಲಿನ ಕೂಲಿ ನಾಚಿಕೆಯಿಲ್ಲದೇ ಬಾಕಿ ಇರಿಸಿಕೊಂಡಿದ್ದಾರೆ ನ್ಯಾಯಕ್ಕಾಗಿ ಆರಂಭಿಸಿದ ಹಗಲು ರಾತ್ರಿ ಧರಣಿ ಯಶಸ್ವಿಯಾಗಿ ಮುಂದುವರಿಯಲಿ ಎಂದು ಹೇಳಿದರು.
ಅಹೋರಾತ್ರಿ ಧರಣಿಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ: ಜಂಟಿ ಸಭೆ ಕರೆಯಲು ನವೆಂಬರ್ 28 ರಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಸಹಸ್ರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.
ಧರಣಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ, ಉಪಾಧ್ಯಕ್ಷ ಕೆ ಶಂಕರ್,ಬೀಡಿ ಸಂಘಟನೆಯ ಮುಖಂಡರಾದ ಉಮೇಶ್ ಕುಂದರ್, ಬಲ್ಕೀಸ್,ನಳಿನಿ, ಸುನೀತಾ ಕಾರ್ಕಳ,ಮೋಹನ, ಕರ್ನಾಟಕ ಪ್ರಾಂತ ಕ್ರಷಿ ಕೂಲಿಕಾರರ ಸಂಘಟನೆಯ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಮೊದಲಾದವರಿದ್ದರು.








