ಕಾರ್ಕಳ: ನವೆಂಬರ್ 09 : ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಶ್ರೀ ಜೈನ ಧರ್ಮ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ ಎಂ ಏನ್ ರಾಜೇಂದ್ರ ಕುಮಾರ್ ಅವರು
ಈ ಮಹೋತ್ಸವವನ್ನು ನಾಡ ಹಬ್ಬದ ರೀತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಳಿಸಬೇಕಾಗಿದ್ದು, ಮಹಾಮಸ್ತಕಾಭಿಷೇಕದ ಮುನ್ನ ಸಾಕಷ್ಟು ಪೂರ್ವ ತಯಾರಿಗಳು ನಡೆಯಬೇಕಾಗಿದೆ.ಸಭೆಯಲ್ಲಿ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಕೇವಲ ಮಹಾಮಸ್ತಕಾಭಿಷೇಕ ಮಾತ್ರ ನಡೆಯದೇ ಸಾರ್ವಜನಿಕರಿಗೂ ಪ್ರಯೋಜನ ಜೊತೆಗೆ ನೆನಪಿಡುವಂತಹ ಕಾಮಗಾರಿಗಳ ನಡೆಸಬೇಕು ಮಹಾಮಸ್ತಕಾಭಿಷೇಕ ಪ್ರಯುಕ್ತ ಬಾಹುಬಲಿ ಬೆಟ್ಟ ಹಾಗೂ ಕಾರ್ಕಳ ಪರಿಸರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಕೆಲಸಕ್ಕಾಗಿ ಲೋಕೋಪಯೋಗಿ, ಪ್ರವಾಸೋದ್ಯಮ, ಪುರಾತತ್ವ ಇಲಾಖೆ, ಅಲ್ಪಸಂಖ್ಯಾತ
ಇಲಾಖೆ ಹಾಗೂ ಪುರಸಭೆಯಿಂದ ಶಾಶ್ವತ ಮೂಲಭೂತ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ರೂ. 20 ಕೋಟಿ ಅನುದಾನದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದ ಅವರು ಮುಂದೆ ಸಭೆ ನಡೆಸಿ ವಿವಿಧ ಸಮಿತಿಗಳನ್ನು ರಚಿಸಿ ಮಹೋತ್ಸವದ ವಿವಿಧ ಚಟುವಟಿಕೆಗಳ ಜವಾಬ್ದಾರಿಗಳನ್ನು ನೀಡಲಾಗುವುದು. ಈ ಮಹೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಎಲ್ಲರ ಸಹಕಾರ ಅತ್ಯಗತ್ಯ. ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ಪುರಾತತ್ವ ಇಲಾಖೆಯಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ವಿಗ್ರಹ, ಚತುರ್ಮುಖ ಬಸದಿ, ಹಿರಿಯಂಗಡಿಯ ಮಾನಸ್ತಂಬ ಹಾಗೂ ಇನ್ನಿತರ ಪುರಾತತ್ವ ಇಲಾಖೆಯ ಸ್ಥಳಗಳ ಸ್ವಚ್ಛತೆ ಮತ್ತು ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಲಾಯಿತು.
ಪುರಾತತ್ವ ಇಲಾಖೆಯ ಅಧಿಕಾರಿಗಳು ಬಾಹುಬಲಿ ಬೆಟ್ಟಕ್ಕೆ ತೆರಳಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಎಸ್. ಅನಂತರಾಜ್ ಪೂವಣಿ, ಕೋಶಾಧಿಕಾರಿ,ಡಾ. ಜೀವಂಧರ ಬಲ್ಲಾಳ್, ಪುರಾತತ್ವ ಇಲಾಖೆಯ ಹಿರಿಯ ಸಂರಕ್ಷಣಾಧಿಕಾರಿ ಸೂರಜ್, ಸ್ಮಾರಕ ಸಂರಕ್ಷಕ ಆನಂದ ನಾಯಕ್, ಜೈನ ಸಮಾಜದ ಪ್ರಮುಖರಾದ ಆಂಡಾರು ಮಹಾವೀರ ಜೈನ್, ಪುಷ್ಪರಾಜ್ ಜೈನ್, ಪ್ರಭಾತ್ ಕುಮಾರ್,ಮುಂತಾದವರು ಉಪಸ್ಥಿತರಿದ್ದರು.








