ಮಣಿಪಾಲ: ಮಣಿಪಾಲದ ಈಶ್ವರನಗರದ ಇಳಿಜಾರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 169A ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ನಗರಸಭೆಯ ಕುಡಿಯುವ ನೀರಿನ ಪಂಪ್ಹೌಸ್ಗೆ ನುಗ್ಗಿ ಮಗುಚಿ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.
ರಾತ್ರಿ ಸುಮಾರು 11 ಗಂಟೆ ವೇಳೆಗೆ ಘಟನೆ ಸಂಭವಿಸಿದ್ದು, ಆಟೋದಲ್ಲಿ ಉಡುಪಿಯಿಂದ ಹಿರಿಯಡ್ಕದತ್ತ ಪ್ರಯಾಣಿಸುತ್ತಿದ್ದ ತಾಯಿ ಹಾಗೂ ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಗಿದ್ದಾರೆ ಎನ್ನಲಾಗಿದೆ
ಪೆರಂಪಳ್ಳಿಯ ರಿಕ್ಷಾ ಚಾಲಕ ಆಟೋವನ್ನು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.ಅಪಘಾತಕ್ಕೀಡಾದ ಆಟೋದ ಮುಂಭಾಗದಲ್ಲಿ ‘ಬ್ರಹ್ಮ ಬೈದರ್ಕಳ’ ಎಂದು ಬರೆಯಲಾಗಿದ್ದು, ಹೂವಿನ ಹಾರವೂ ಹಾಕಲಾಗಿತ್ತು.
ಈಶ್ವರ ನಗರದ ಈ ಭಾಗದಲ್ಲಿ ರಸ್ತೆ ಇಳಿಜಾರಿನಲ್ಲಿದ್ದು, ಏಕಾಏಕಿ ತಿರುವು ಇರುವುದರಿಂದ ವಾಹನ ಸವಾರರಿಗೆ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಎದುರಾಗುತ್ತಿದೆ. ಈ ಪ್ರದೇಶದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿರುವುದರಿಂದ ರಸ್ತೆ ವಿನ್ಯಾಸ ಹಾಗೂ ತಿರುವಿನ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸೂಚನಾ ಫಲಕ ಅಳವಡಿಸಿದ್ದರೂ ಇಳಿಜಾರು ಮತ್ತು ಏಕಾಏಕಿ ಎದುರಾಗುವ ತಿರುವಿನಿಂದಾಗಿ ವಾಹನ ಚಾಲಕರಿಗೆ ಅಪಾಯ ತಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅಪಾಯಕಾರಿ ತಿರುವಿನಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಘಟನಾ ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.






