ಮಣಿಪಾಲ, ಆಗಸ್ಟ್ 07, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಇಂಗಾಲ ಆಧಾರಿತ ಇಂಧನಗಳ ಒಟ್ಟು ಕ್ಯಾಲೋರಿಫಿಕ್ ಮೌಲ್ಯವನ್ನು (ಜಿಸಿವಿ) ತ್ವರಿತವಾಗಿ ಪತ್ತೆಹಚ್ಚುವ ಅತ್ಯಾಧುನಿಕ ‘ಎಲ್ಐಬಿಎಸ್’ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ದೇಶದ ಪ್ರಮುಖ ರಾಸಾಯನಿಕ ಕಂಪನಿಯಾದ ಜಿಹೆಚ್ಸಿಎಲ್ ಲಿಮಿಟೆಡ್ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ಜಿಹೆಚ್ಸಿಎಲ್ನ ವಾಣಿಜ್ಯ ವಿಭಾಗದ ಉಪಾಧ್ಯಕ್ಷ ಸಂಜಯ್ ಗುಪ್ತ ಹಾಗೂ ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರು ಈ ಒಪ್ಪಂದದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಅತ್ಯಾಧುನಿಕ ಸ್ಪೆಕ್ಟ್ರೋಸ್ಕೋಪಿ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ತಂತ್ರಜ್ಞಾನಗಳನ್ನು ಬಳಸಿ ಸ್ಥಳದಲ್ಲೇ ಇಂಧನದ ಗುಣಮಟ್ಟವನ್ನು ವೇಗವಾಗಿ ಪರೀಕ್ಷಿಸುವ ವ್ಯವಸ್ಥೆಯನ್ನು ಈ ಒಪ್ಪಂದದಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೆಚ್ಚು ಸಮಯ ಬೇಡುವ ಹಳೆಯ ಪರೀಕ್ಷಾ ವಿಧಾನಗಳನ್ನು ಕೈಬಿಟ್ಟು, ನಿಖರ ದತ್ತಾಂಶ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಯೋಗಾಲಯ ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಉಪಕ್ರಮ ಮುಂದಾಗಿದೆ. ಇದರಿಂದಾಗಿ ಕೈಗಾರಿಕಾ ವಲಯದಲ್ಲಿ ತ್ವರಿತ ಹಾಗೂ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ.
ಭಾರತದ ಪ್ರಮುಖ ರಾಸಾಯನಿಕ ಉತ್ಪಾದನಾ ಸಂಸ್ಥೆಯಾದ ಜಿಹೆಚ್ಸಿಎಲ್, ಶಕ್ತಿ ಉತ್ಪಾದನೆ ಹಾಗೂ ಕೈಗಾರಿಕಾ ತಾಪನಕ್ಕಾಗಿ ಇಂಗಾಲದ ಇಂಧನಗಳನ್ನೇ ನೆಚ್ಚಿಕೊಂಡಿದೆ. ಅತ್ಯುತ್ತಮ ಇಂಧನವು ಕಾರ್ಯದಕ್ಷತೆಯನ್ನು ಹೆಚ್ಚಿಸಿ, ವೆಚ್ಚವನ್ನು ತಗ್ಗಿಸುತ್ತದೆ ಎಂಬುದನ್ನು ಅರಿತಿರುವ ಸಂಸ್ಥೆಯು, ಇದೀಗ ತ್ವರಿತ ಮತ್ತು ಹೆಚ್ಚು ನಿಖರವಾದ ನೈಜ-ಸಮಯದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಇಂಧನದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮುಂದಾಗಿದೆ.
ಬೃಹತ್ ಕೈಗಾರಿಕೆಗಳ ನಿರ್ವಹಣಾ ವೆಚ್ಚದಲ್ಲಿ ಇಂಗಾಲ ಆಧಾರಿತ ಇಂಧನಗಳದ್ದೇ ಸಿಂಹಪಾಲು. ಇದುವರೆಗೆ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಅವಲಂಬಿಸಿದ್ದರಿಂದ ಸಾಕಷ್ಟು ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಜಿಹೆಚ್ಸಿಎಲ್ ಲಿಮಿಟೆಡ್ ಮತ್ತು ಮಾಹೆಯ ‘ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಫಿಸಿಕ್ಸ್’ (ಎಂಐಎಪಿ) ಕೈಜೋಡಿಸಿವೆ.
ಇಂಧನ ಪೂರೈಕೆಯಾಗುವ ಸ್ಥಳದಲ್ಲಿಯೇ ಕ್ಷಣಾರ್ಧದಲ್ಲಿ ಅದರ ಗುಣಮಟ್ಟವನ್ನು ನಿಖರವಾಗಿ ಪತ್ತೆಹಚ್ಚುವ ಸುಧಾರಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಇದು ಕೈಗಾರಿಕೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಜೊತೆಗೆ ಇಂಧನದ ಸದ್ಬಳಕೆಗೆ ನೆರವಾಗಲಿದೆ.
ಜಿಹೆಚ್ಸಿಎಲ್ನ ಸುತ್ರಾಪಾದ ಘಟಕದ ಕಾರ್ಯಾಚರಣೆ ಮುಖ್ಯಸ್ಥ ಮಯೂರೇಶ್ ಹೆಡೆ ಪ್ರತಿಕ್ರಿಯಿಸಿ, ‘ಕಾರ್ಯದಕ್ಷತೆ ಮತ್ತು ಸುಸ್ಥಿರತೆಗಾಗಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ನಮ್ಮ ಬದ್ಧತೆಗೆ ಈ ಒಪ್ಪಂದ ಸಾಕ್ಷಿಯಾಗಿದೆ. ಹಳೆಯ ಪರೀಕ್ಷಾ ವಿಧಾನಗಳ ಬದಲಿಗೆ ನೈಜ-ಸಮಯದ ವಿಶ್ಲೇಷಣಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದರಿಂದ ಗೊಂದಲಗಳು ನಿವಾರಣೆಯಾಗಿ, ಕಾರ್ಯನಿರ್ವಹಣೆಯ ವೇಗ ಹೆಚ್ಚಲಿದೆ. ಕೈಗಾರಿಕಾ ವಲಯದಲ್ಲಿ ಇಂಧನ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಹೊಸ ಉಪಕ್ರಮವು ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ನಮಗಿದೆ’ ಎಂದರು.
ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಪ್ರತಿಕ್ರಿಯಿಸಿ, ’ಶೈಕ್ಷಣಿಕ ಸಂಶೋಧನೆಯು ಕೈಗಾರಿಕಾ ವಲಯದ ಜಟಿಲ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಲ್ಲದು ಎಂಬುದನ್ನು ಈ ಯೋಜನೆ ತೋರಿಸಿಕೊಡಲಿದೆ. ಎಲ್ಐಬಿಎಸ್ ತಂತ್ರಜ್ಞಾನದೊಂದಿಗೆ ಎಐ ಮತ್ತು ಎಂಎಲ್ ಅನ್ನು ಬೆರೆಸಿ, ವೈಜ್ಞಾನಿಕ ಹಾಗೂ ವಾಣಿಜ್ಯಿಕವಾಗಿ ಅತ್ಯಂತ ಉಪಯುಕ್ತವಾದ ನವೀನ ವ್ಯವಸ್ಥೆಯನ್ನು ನಾವು ರೂಪಿಸುತ್ತಿದ್ದೇವೆ. ಅತಿ ಹೆಚ್ಚು ಇಂಧನ ಬಳಸುವ ವಿವಿಧ ಕೈಗಾರಿಕಾ ವಲಯಗಳಿಗೆ ಅನುಕೂಲವಾಗುವಂತಹ ಪ್ರಾಯೋಗಿಕ ಸಂಶೋಧನೆಗೆ ಈ ಸಹಯೋಗವು ಭದ್ರ ಬುನಾದಿ ಹಾಕಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಂಐಎಪಿಯ ಪ್ರಧಾನ ಸಂಶೋಧಕರಾಗಿ ಡಾ. ಉಣ್ಣಿಕೃಷ್ಣನ್ ವಿ.ಕೆ. ಅವರು ಈ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿ ಪ್ರೊ. ಕರುಣಾಕರ್ ಕೋಟೆಗಾರ್ ಭರವಸೆ ನೀಡಿದರು. ಒಪ್ಪಂದದ ಸಂದರ್ಭದಲ್ಲಿ ಎಂಐಎಪಿ ನಿರ್ದೇಶಕ ಡಾ. ಸಾಜನ್ ಡೇನಿಯಲ್ ಜಾರ್ಜ್ ಮತ್ತು ಮಾಹೆಯ ಕಾರ್ಪೊರೇಟ್ ಸಂಪರ್ಕ ವಿಭಾಗದ ನಿರ್ದೇಶಕ ಡಾ. ಹರೀಶ್ಕುಮಾರ್ ಹಾಜರಿದ್ದರು.
ಬೌದ್ಧಿಕ ಆಸ್ತಿಯನ್ನು (ಐಪಿ) ರೂಪಿಸುವುದು ಹಾಗೂ ವಾಣಿಜ್ಯ ಬಳಕೆಗೆ ಸೂಕ್ತವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಮತ್ತೊಂದು ಪ್ರಮುಖ ಉದ್ದೇಶವಾಗಿದೆ. ಈ ಯೋಜನೆ ಯಶಸ್ವಿಯಾದರೆ, ಇಂಗಾಲ ಆಧಾರಿತ ಇಂಧನ ಬಳಸುವ ಎಲ್ಲಾ ಕೈಗಾರಿಕೆಗಳಿಗೂ ಈ ‘ಎಲ್ಐಬಿಎಸ್’ ಮೇಲ್ವಿಚಾರಣಾ ವ್ಯವಸ್ಥೆ ಒಂದು ಅತ್ಯುತ್ತಮ ಮಾದರಿಯಾಗಲಿದೆ. ಇದು ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವುದರ ಜತೆಗೆ, ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯ ಮಹತ್ವವನ್ನು ಸಾರಲಿದೆ.






