ಉಡುಪಿ:ನವೆಂಬರ್ 02:ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠದ ಪರಮಪೂಜ್ಯ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಪೂರ್ವ ಜಾಗತಿಕ ಯೋಜನೆಯಾದ “ಕೋಟಿ ಗೀತಾ ಲೇಖನ ಯಜ್ಞ” ಮತ್ತು ಗೀತಾ ಜಯಂತಿಗಳ ಅಂಗವಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ “ಬೃಹತ್ ಗೀತೋತ್ಸವ” ವೆಂಬ ಹೆಸರಿನ , ಒಂದು ತಿಂಗಳ ಪರ್ಯಂತ ನಡೆಯುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರ ಅಂಗವಾಗಿ ರಾಜಾಂಗಣದ ಬಳಿ ವಿವಿಧ ಕಾರ್ಯಕರ್ತರ ವಿವಿಧ ಸಂವಹನಗಳಿಗಾಗಿ ಗೀತೋತ್ಸವ ಕಾರ್ಯಾಲಯವನ್ನು ಇಂದು ತೆರಲಾಯಿತು.
ದೀಪ ಬೆಳಗುವ ಮೂಲಕ ಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಕಾರ್ಯಾಲಯವನ್ನು ಉದ್ಘಾಟಿಸಿದರು.
ತದನಂತರ ರಾಜಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅನುಗ್ರಹಿಸಿದ ಪೂಜ್ಯ ಪರ್ಯಾಯ ಶ್ರೀಪಾದರು ತಮ್ಮ ವಿಶ್ವ ಗೀತಾ ಪರ್ಯಾಯ ದಲ್ಲಿ ಭಗವದ್ಗೀತೆಯ ತತ್ವವನ್ನೇ ಜೀವನದಲ್ಲಿ ಅಳವಡಿಸಿಕೊಂಡಿರುವ ವಿಶ್ವದೆಲ್ಲೆಡೆ ಸಂಚರಿಸಿದಾಗ ಭಗವದ್ಗೀತೆಯನ್ನು ಉಡುಗೊರೆಯಾಗಿ ವಿಶ್ವ ನಾಯಕರಿಗೆ ನೀಡುವ ಪರಿಪಾಠವನ್ನು ರೂಢಿಸಿಕೊಂಡಿರುವ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನವಂಬರ್ ೨೮ ರಂದು ಉಡುಪಿಗೆ ಆಗಮಿಸಿ ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸುತ್ತಿರುವುದು ನಮಗೆ ತುಂಬ ಸಂತಸವನ್ನು ತಂದಿದೆ.
ಇದೆಲ್ಲವೂ ಗೀತಾಚಾರ್ಯ ಶ್ರೀಕೃಷ್ಣನ ಸಂಕಲ್ಪವಾಗಿದೆ. ನೀವೆಲ್ಲರೂ ಈ ಉತ್ಸವದ ಯಶಸ್ಸಿಗೆ ಸಹಕರಿಸಬೇಕು, ತನ್ಮೂಲಕ ಶ್ರೀಕೃಷ್ಣ ಮುಖ್ಯಪ್ರಾಣರ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ಅನುಗ್ರಹಿಸಿದರು .
ಈಗಾಗಲೇ ವಿಜೃಂಭಣೆಯಿಂದ ಶಾರದೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗಳಾದ ಶ್ರೀ ಸುಪ್ರಸಾದ ಶೆಟ್ಟಿಯವರ ಸಂಚಾಲಕತ್ವದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ದಿವಾನರಾದ ಶ್ರೀ ನಾಗರಾಜಾಚಾರ್ಯ ರವರು ಮಾತನಾಡಿ ವಿವಿಧ ಸಮಿತಿಗಳನ್ನು ಉಲ್ಲೇಖಿಸಿ ಎಲ್ಲ ಸಮುದಾಯದ ಆಸಕ್ತ ಜನರು ಪಾಲ್ಗೊಳ್ಳುವ ಮೂಲಕ ಬೃಹತ್ ಮಾಸೋತ್ಸವ ಕಾರ್ಯಕ್ರಮವನ್ನು ಯಶಸ್ವಿಗಿಳಿಸುವಂತೆ ವಿನಂತಿಸಿದರು.
ಸಂಚಾಲಕ ರಾದ ಶ್ರೀ ಬೈಕಾಡಿ ಸುಪ್ರಸಾದ್ ಶೆಟ್ಟಿಯವರು ಮಾತನಾಡಿ ಹಿಂದೂ ಸಮಾಜೋತ್ಸವದ ಮಾದರಿಯಲ್ಲಿ ವಿವಿಧ ಸಂಘಟನೆ ಗಳ ಸಹಕಾರದೊಂದಿಗೆ ಬೃಹತ್ತಾಗಿ ಯಶಸ್ವಿಯಾಗಿ ಮಾಡಲು ವಿನಂತಿಸಿ ಎಲ್ಲರ ಸಹಕಾರವನ್ನು ಕೋರಿದರು.
ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಸನ್ಮಾನ್ಯ ಪ್ರಧಾನಿಯವರ ಭೇಟಿಯ ವಿವರವನ್ನು ನೀಡಿ ಸಾರ್ವಜನಿಕರು ಮುಕ್ತವಾಗಿ ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಗೀತೋತ್ಸವದ ಮಾಹಿತಿಯನ್ನು ಪ್ರಮೋದ್ ಸಾಗರ್ ರವರೂತ್ ನೀಡಿದರು ರಮೇಶ ಭಟ್ ಸ್ವಾಗತಿಸಿದರು . ವಿಕ್ರಂ ಕುಂಟಾರ ರವರು ವಂದಿಸಿದರು.
ಸಭೆ ಯಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ಹಿಂದೂ ಜಾಗರಣ ವೇದಿಕೆ, ದೈವಜ್ಞ ಬ್ರಾಹ್ಮಣರ ಸಂಘ, ರಾಮ ಕ್ಷತ್ರಿಯ ಸಂಘ, ಮನೋಳಿಗುಜ್ಜಿ ಗಣೇಶೋತ್ಸವ ಸಮಿತಿ, ಗಾಣಿಗ ಸಮಾಜ, ಉಡುಪಿ ತಾಲೂಕು ಮಾತೃ ಮಂಡಳಿ, ತಾಲೂಕು ಬ್ರಾಹ್ಮಣರ ಸಂಘ, ಅಯ್ಯಪ್ಪ ಸೇವಾ ಮಹಿಳಾ ಮಂಡಳಿ, ಫಣಿಯಾಡಿ ಯುವಕರ ಸಂಘ, ಕಡಿಯಾಳಿ ಗೆಳೆಯರ ಬಳಗ, ನವಚೇತನ ಯುವಕ ಮಂಡಲ ಮೊದಲಾದ ಸಂಘ ,ಯುವ ಬ್ರಾಹ್ಮಣ ಪರಿಷತ್,ತು ಶಿ ಮಾ ಮ ಮೊದಲಾದ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.








