ಉಡುಪಿ: ಜೂನ್ 12 : ಕುಂದಾಪುರ ಬಳಿಯ ಮಾವಿನಕಟ್ಟೆ ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ಹಣದ ವಿಷಯದಲ್ಲಿ ಮಹಿಳೆಯೊಬ್ಬರು ದಲಿತ ಯುವತಿ ಮೇಲೆ ನಡೆಸಿದ ಹಲ್ಲೆ ಪ್ರಕರಣವನ್ನು ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್) ಖಂಡಿಸಿದೆ.
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿಯನ್ನು ಹಾಗೂ ಈಕೆಯ ಹೆತ್ತವರನ್ನು ಮಂಗಳವಾರ (10/06/2025) ಭೇಟಿಯಾದ ಡಿ ಎಚ್ ಎಸ್ ಜಿಲ್ಲಾ ಸಂಚಾಲಕರಾದ ಸಂಜೀವ ಬಳ್ಕೂರು ನೇತೃತ್ವದ ನಿಯೋಗ ಯುವತಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿಸಿತು. ಮಾತ್ರವಲ್ಲ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಜೊತೆಗೆ ನಿಂತು ಸಹಕರಿಸುವುದಾಗಿ ಕುಟುಂಬದವರಿಗೆ ಭರವಸೆ ನೀಡಿತು.
ಘಟನೆ ನಡೆದ ಬೆನ್ನಿಗೆ ವಿಳಂಬ ಮಾಡದೆ ಆರೋಪಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ ಪೊಲೀಸ್ ಅಧಿಕಾರಿಗಳ ಕರ್ತವ್ಯ ಪಾಲನೆಯನ್ನು ಡಿ ಎಚ್ ಎಸ್ ಪರವಾಗಿ ಅಭಿನಂದಿಸಲಾಯಿತು.
ನಿಯೋಗದಲ್ಲಿ ದಲಿತ ಹಕ್ಕುಗಳ ಸಮಿತಿಯ ನಾಯಕರಾದ ಸಂಜೀವ ಬಳ್ಕೂರು, ಸಹ ಸಂಚಾಲಕರಾದ ರವಿ ವಿ. ಎಂ., ಸಂಹಿತ್ ಸುಜಯ್ ಬಳ್ಕೂರು, ವಿಜಯ್ ಕುಮಾರ್ ಬಳ್ಕೂರು, ಮಂಜುನಾಥ್ ಬಳ್ಕೂರು, ಸಿಐಟಿಯು ನಾಯಕರಾದ ಎಚ್. ನರಸಿಂಹ ಹಾಗೂ ಚಂದ್ರಶೇಖರ ವಿ. ಉಪಸ್ಥಿತರಿದ್ದರು.
ಬುಧವಾರದಂದು ಜನವಾದಿ ಮಹಿಳಾ ಸಂಘಟನೆ ಮತ್ತು ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್) ನಿಯೋಗ ಜಂಟಿಯಾಗಿಸಂತ್ರಸ್ತೆ ಲಕ್ಷ್ಮಿ ಅವರ ಮನೆಗೆ ಭೇಟಿ ನೀಡಿತು. ಮುಂದಿನ ಕಾನೂನು ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯ – ಸಹಕಾರ ನೀಡುವುದಾಗಿ ನಿಯೋಗ ಭರವಸೆ ನೀಡಿತು.
ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆಯ ನಾಗರತ್ನ ನಾಡ, ಶೀಲಾವತಿ ಇದ್ದರು. ದಲಿತ ಮುಖಂಡರಾದ ಜಯಕುಮಾರ್, ಶಶಿ ಬಳ್ಕೂರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.