ಮಂಗಳೂರು : ಮೇ 17:ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಸೆಕ್ಷನ್ ಮಧ್ಯೆ ರೈಲು ಮಾರ್ಗದ ವಿದ್ಯುದ್ದೀಕರಣ (ಆರ್ಇ) ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 1ರಿಂದ ನವೆಂಬರ್ 1ರವರೆಗೆ ಹಗಲಿನ ವೇಳೆ ಸಂಚರಿಸುವ ರೈಲುಗಳು ರದ್ದಾಗಲಿವೆ.
ಮಂಗಳೂರು-ಬೆಂಗಳೂರು ನಡುವೆ ಜೂ.1ರಿಂದ ನ.1ರ ವರೆಗೆ ಸುಮಾರು 154 ದಿನಗಳ ಕಾಲ ಹಗಲು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಮೇ 31ರಿಂದ ನವೆಂಬರ್ 1ರವರೆಗೆ ಪ್ರತಿ ಶನಿವಾರ ಸಂಚರಿಸುವ ರೈಲು ಸಂಖ್ಯೆ 16539 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು ರದ್ದಾಗಲಿದೆ.
ಭಾನುವಾರ ಸಂಚರಿಸುವ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಜೂ.1ರಿಂದ ನ.2ರ ವರೆಗೆ ರದ್ದು.
ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚರಿಸುವ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ತ್ರೀ-ವೀಕ್ಲಿ ಎಕ್ಸ್ಪ್ರೆಸ್ ರೈಲು ಜೂ.1ರಿಂದ ಆ.30ರ ವರೆಗೆ ಬಂದ್.
ಜೂ.2ರಿಂದ ಆ.31ರ ವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ರೈಲು ಸಂಖ್ಯೆ 16576 ಮಂಗಳೂರು-ಯಶವಂತಪುರ ತ್ರೀ-ವೀಕ್ಲಿ ಎಕ್ಸ್ಪ್ರೆಸ್ ರೈಲು ಸ್ಥಗಿತ.
ಜೂ.2ರಿಂದ ಅ.31ರ ವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ನಂ.16515 ಯಶವಂತಪುರ-ಕಾರವಾರ ತ್ರೀ-ವಿಕ್ಲಿ ಎಕ್ಸ್ಪ್ರೆಸ್ ಹಾಗೂ ಜೂ.3ರಿಂದ ನ.1ರ ವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚರಿಸುವ ರೈಲು ನಂ.16516 ಕಾರವಾರ-ಯಶವಂತಪುರ ತ್ರೀ-ವೀಕ್ಲಿ ಎಕ್ಸ್ಪ್ರೆಸ್ ರೈಲುಗಳ ಸಂಚಾರ ರದ್ದುಗೊಳ್ಳಲಿದೆ.
ಸಂಘಟನೆಗಳಿಂದ ವಿರೋಧ: ರೈಲು ಪ್ರಯಾಣಿಕರಿಂದ, ಹೋರಾಟ ಸಮಿತಿಗಳಿಂದ ಸಲಹೆ ಪಡೆಯದೆ ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳದೆ, ಏಕಾಏಕಿ ರೈಲು ಸಂಚಾರ ರದ್ದು ಮಾಡುವ ನಿರ್ಧಾರ ಸರಿಯಲ್ಲ ಎಂದು ರೈಲ್ವೇ ಪ್ರಯಾಣಿಕರು ಮತ್ತು ಯಾತ್ರಾ ಸಂಘಟನೆ, ಹೋರಾಟ ಸಮಿತಿಗಳು ರೈಲು ರದ್ದತಿಗೆ ವಿರೋಧ ವ್ಯಕ್ತಪಡಿಸಿದ್ದು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸುವಂತೆ ಮನವಿ ಮಾಡಿವೆ.
ಮಾತ್ರವಲ್ಲದೆ, ಮುಂದಿನ ತಿಂಗಳಿಂದ ಮಳೆಗಾಲ ಆರಂಭಗೊಳ್ಳಲಿದ್ದು, ಘಟ್ಟ ಪ್ರದೇಶದಲ್ಲಿ ಭೂ ಕುಸಿತಗಳೂ ಉಂಟಾಗುವುದರಿಂದ ಘಾಟ್ ರಸ್ತೆ ಪ್ರದೇಶದಲ್ಲಿ ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳ ಜನರಿಗೆ ಬೆಂಗಳೂರನ್ನು ಸಂಪರ್ಕಿಸಲು ರೈಲುಗಳೇ ಆಧಾರವಾಗಿದೆ. ಆದ್ದರಿಂದ ರೈಲುಗಳನ್ನು ರದ್ದು ಮಾಡುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಲಿದ್ದು, ರಾತ್ರಿ ಸಂಚರಿಸುವ ರೈಲುಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಎಲ್ಲಾ ಕಾರಣಗಳಿಂದ ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಕಾಮಗಾರಿ ನಿರ್ವಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ರೈಲ್ವೇ ಬಳಕೆದಾರರ ಸಂಘ ಒತ್ತಾಯಿಸಿದೆ.
ಈ ಬಗ್ಗೆ ಮಾತನಾಡಿದ ನೈರುತ್ಯ ರೈಲ್ವೇ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ, “ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಸೆಕ್ಷನ್ ಮಧ್ಯೆ ವಿದ್ಯುದ್ದೀಕರಣ ಕಾಮಗಾರಿ ಕೈಗೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ. ಎಲ್ಲಾ ಕಡೆಗಳಲ್ಲಿ ಈಗಾಗಲೇ ವಿದ್ಯುದ್ದೀಕರಣವಾಗಿ ಒಂದು ಭಾಗದಲ್ಲಿ ಮಾತ್ರ ನಡೆಯದಿದ್ದರೆ ಈ ಯೋಜನೆಯ ಉದ್ದೇಶವೇ ಈಡೇರುವುದಿಲ್ಲ. ಪ್ರಯಾಣಿಕರಿಗೆ ಈಗ ಸ್ವಲ್ಪ ಕಷ್ಟವಾದರೂ ಇದರಿಂದ ಮುಂದಿನ ದಿನಗಳಲ್ಲಿ ಬಹಳಷ್ಟು ಪ್ರಯೋಜನವಾಗಲಿದೆ. ಮಳೆಗಾಲದಲ್ಲಿ ಕಾಮಗಾರಿಗೆ ಸ್ವಲ್ಪ ಸಮಸ್ಯೆಯಾದರೂ, ನಿಗದಿತ ಅವಧಿಯಲ್ಲೇ ಕೆಲಸ ಮುಗಿಯಲೇಬೇಕು ಎಂಬ ಉದ್ದೇಶ ನಮ್ಮದು. ಎಲೆಕ್ಟ್ರಿಕಲ್ ರೈಲು ಎಂಜಿನ್ಗಳು ಶೀಘ್ರವೇ ಬರಲಿದ್ದು, ಅವುಗಳನ್ನು ಬಳಸಲು ಈ ಪ್ರದೇಶದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳಬೇಕಿದೆ” ಎಂದು ಹೇಳಿದರು.