ಕುಂದಾಪುರ : ಮಾರ್ಚ್ 03:ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ
ಕಂಡೂರು ನಿವಾಸಿ ಜೀನತ್ ಅವರು 2022ರಲ್ಲಿ ಶಿವಮೊಗ್ಗ ಸಾಗರದ ಆಶ್ರೀಯಾ ಅವರಿಂದ 9,85,000 ರೂ. ಸಾಲ ಪಡೆದಿದ್ದು, 2023ರಲ್ಲಿ ಮರುಪಾವತಿಗಾಗಿ ಅಷ್ಟೇ ಮೊತ್ತದ ರೂ.ಗಳ ಚೆಕ್ ನೀಡಿದ್ದರು ಎನ್ನಲಾಗಿದೆ .ಚೆಕ್ಕನ್ನು ನಗದೀಕರಣಕ್ಕೆ ಹಾಕಿದಾಗ ಅಮಾನ್ಯಗೊಂಡಿದ್ದು ಜೀನತ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಾಗರದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದ ಸಮನ್ಸ್ ಪಡೆದ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗಿ ತಾನು ಯಾವುದೇ ಸಾಲವನ್ನು ಪಡೆದಿಲ್ಲ ಮತ್ತು ದೂರುದಾರರು ಹೇಳಿರುವಂತೆ ಹಣ ಮರುಪಾವತಿಗಾಗಿ ಚೆಕ್ ನೀಡಿಲ್ಲ ಎಂದು ಪ್ರತಿಪಾದಿಸಿದ್ದರು.
ಜತೆಗೆ ದೂರುದಾರರ ಆರ್ಥಿಕ ಸಾಮರ್ಥ್ಯ ಪ್ರಶ್ನಿಸಿ ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ವಾದ ಮಂಡಿಸಿದ್ದರು. ಸಾಗರದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಾದೇಶ ಅವರು ಆರೋಪಿಯ ವಾದವನ್ನು ಎತ್ತಿಹಿಡಿದು ದೋಷ ಮುಕ್ತಗೊಳಿಸಿ ಆದೇಶಿಸಿರುತ್ತಾರೆ.
ಆರೋಪಿಯ ಪರವಾಗಿ ವಕೀಲರಾದ ಗುರುರಾಜ್ ಜಿ. ಎಸ್. ಮಟ್ಟು ವಾದಿಸಿದರು.