ಮಾ.16: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮಗಳು ಮಧ್ಯಪ್ರಾಚ್ಯಕ್ಕೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೇಲೂ ಪರಿಣಾಮ ಬೀರುತ್ತಿರುವುದು ಕಾಣಿಸುತ್ತಿದೆ. ಯುದ್ಧದ ಹಿನ್ನೆಲೆ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರ ಪರಿಣಾಮವಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಅನೇಕ ಹೋಟೆಲ್ಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿರುವುದರಿಂದ ತರಕಾರಿಗಳ ಬೇಡಿಕೆ ಗಣನೀಯವಾಗಿ ಕುಸಿದಿದೆ.
ಸಾಮಾನ್ಯವಾಗಿ ತರಕಾರಿ ಉತ್ಪಾದನೆಯ ಸುಮಾರು 60 ಶೇಕಡಾ ಪ್ರಮಾಣವನ್ನು ಹೋಟೆಲ್ ಮತ್ತು ಆಹಾರ ಉದ್ಯಮವೇ ಖರೀದಿಸುತ್ತವೆ. ಆದರೆ ಹೋಟೆಲ್ಗಳು ಮುಚ್ಚಿರುವುದರಿಂದ ಈ ಬೇಡಿಕೆ ಇಲ್ಲದಂತಾಗಿದ್ದು, ತರಕಾರಿ ಬೆಲೆಯಲ್ಲಿ ಭಾರೀ ಕುಸಿತ ಉಂಟಾಗಿದೆ. ಇದರ ನೇರ ಪರಿಣಾಮ ರೈತರ ಮೇಲೆ ಬೀಳುತ್ತಿದೆ.
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಿಂದೆ 40 ರಿಂದ 50 ರೂ.ವರೆಗೆ ಮಾರಾಟವಾಗುತ್ತಿದ್ದ ಅನೇಕ ತರಕಾರಿಗಳ ಬೆಲೆ ಇದೀಗ 10 ರಿಂದ 20 ರೂ.ವರೆಗೆ ಇಳಿಕೆಯಾಗಿದೆ. ಕೆಲ ತರಕಾರಿಗಳ ಬೆಲೆ ಮತ್ತಷ್ಟು ಕುಸಿದು ಕ್ಯಾಬೇಜ್ 2 ರಿಂದ 3 ರೂ., ಹೂಕೋಸು 5 ರಿಂದ 8 ರೂ. ದರಕ್ಕೆ ಮಾರಾಟವಾಗುತ್ತಿದೆ. ಕ್ಯಾಪ್ಸಿಕಂ, ಹೀರೆಕಾಯಿ, ಬಜ್ಜಿ ಮೆಣಸಿನಕಾಯಿ, ಸ್ವೀಟ್ ಕಾರ್ನ್, ಕ್ಯಾರೆಟ್, ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆಯೂ ತೀವ್ರವಾಗಿ ಕುಸಿದಿದೆ.
ಬಜ್ಜಿ, ಬೋಂಡಾ, ಗೋಬಿ ಮಂಚೂರಿ, ನೂಡಲ್ಸ್, ಫ್ರೈಡ್ ರೈಸ್ ಸೇರಿದಂತೆ ವಿವಿಧ ತಿಂಡಿಗಳನ್ನು ತಯಾರಿಸುವ ಸಣ್ಣ ಹೋಟೆಲ್ಗಳು ಹಾಗೂ ತಿಂಡಿ ಅಂಗಡಿಗಳು ಅನಿಲ ಸಿಲಿಂಡರ್ ಕೊರತೆಯಿಂದಾಗಿ ಮುಚ್ಚಿರುವುದೂ ತರಕಾರಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಬೇಸಿಗೆ ಕಾಲದಲ್ಲೂ ಬೆಳೆಗಳನ್ನು ಬೆಳೆಸಲು ರೈತರು ಲಕ್ಷಾಂತರ ರೂ. ಹೂಡಿಕೆ ಮಾಡಿದ್ದು, ಕಷ್ಟಪಟ್ಟು ಉತ್ಪಾದನೆ ಮಾಡಿದ್ದಾರೆ. ಆದರೆ ಬೆಲೆ ದಿಢೀರ್ ಕುಸಿತದಿಂದಾಗಿ ಅವರಿಗೆ ಸೂಕ್ತ ಆದಾಯ ಸಿಗದೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಇದೇ ಪರಿಸ್ಥಿತಿ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಕಾಣಿಸುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಮಯದಲ್ಲಿ ತರಕಾರಿ ಬೆಲೆ ಏರಿಕೆಯಾಗುವುದು ರೂಢಿ. ಆದರೆ ಯುದ್ಧದ ಪರಿಣಾಮವಾಗಿ ಕೃಷಿ ಮಾರುಕಟ್ಟೆಯಲ್ಲೂ ಅನಿಶ್ಚಿತತೆ ಉಂಟಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋಟೆಲ್ ಉದ್ಯಮ ಮತ್ತೆ ಚೇತರಿಸಿಕೊಂಡ ಬಳಿಕವೇ ತರಕಾರಿ ಮಾರುಕಟ್ಟೆ ಸಹಜ ಸ್ಥಿತಿಗೆ ಬರಬಹುದು ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರಿಗೆ ನೆರವು ನೀಡಬೇಕು ಎಂದು ರೈತರು ಹಾಗೂ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.







