ನವಿ ಮುಂಬೈ: ಪ್ರತಿಯೊಬ್ಬರ ಜೀವನದಲ್ಲಿಯೂ ಭಗವಂತನದ್ದೇ ಆದ ಯೋಜನೆಯಿರುತ್ತದೆ. ಗುರುಗಳು ಮತ್ತು ಶಾಸ್ತ್ರಗಳು ತೋರಿಸುವ ಮಾರ್ಗವನ್ನು ಅನುಸರಿಸಿ, ಆತನ ಸಂಕಲ್ಪದಂತೆ ನಡೆದಾಗ ಜೀವನ ಸಾರ್ಥಕವಾಗುತ್ತದೆ ಎಂದು ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ನವಿ ಮುಂಬೈನ ಶ್ರೀ ಪುತ್ತಿಗೆ ಶಾಖಾ ಮಠದಲ್ಲಿ ತಮ್ಮ 53ನೇ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ ಶ್ರೀಪಾದರ 65ನೇ ಜನ್ಮನಕ್ಷತ್ರ ಮಹೋತ್ಸವವು ಅಪಾರ ಭಕ್ತಿ ಮತ್ತು ಸಂಭ್ರಮದಿಂದ ನೆರವೇರಿತು. ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, ಕಾರಿನ ಜಿಪಿಎಸ್ ಸರಿಯಾದ ಗಮ್ಯಸ್ಥಾನವನ್ನು ತಲುಪಲು ಮಾರ್ಗದರ್ಶನ ಮಾಡುವಂತೆ, ಭಗವಂತನ ಇಚ್ಛೆಯೇ ನಮ್ಮ ಜೀವನದ ನಿಜವಾದ ಜಿಪಿಎಸ್ ಆಗಿದೆ ಎಂದರು.

“ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು, ಎದುರಾಗುವ ಅವಕಾಶಗಳು ಮತ್ತು ಅನುಭವಗಳ ಮೂಲಕ ಭಗವಂತನು ನಿರಂತರವಾಗಿ ಸೂಚನೆಗಳನ್ನು ನೀಡುತ್ತಿರುತ್ತಾನೆ. ಆ ಸೂಚನೆಗಳನ್ನು ಗುರುತಿಸಿ, ಗುರುಗಳು ಮತ್ತು ಶಾಸ್ತ್ರಗಳ ಮಾರ್ಗದರ್ಶನದಲ್ಲಿ ನಡೆದರೆ ಆತನೇ ನಮ್ಮನ್ನು ಸರಿಯಾದ ಗಮ್ಯಸ್ಥಾನಕ್ಕೆ ಕರೆದೊಯ್ಯುತ್ತಾನೆ” ಎಂದು ತಿಳಿಸಿದರು.
ತಾವು ಸನ್ಯಾಸಿಯಾಗಬೇಕೆಂಬ ಕಲ್ಪನೆಯೇ ಬಾಲ್ಯದಲ್ಲಿ ಇರಲಿಲ್ಲ. ವಿಜ್ಞಾನಿಯಾಗಬೇಕೆಂಬ ಆಸೆಯಿತ್ತು. ಆದರೆ ಗುರುಗಳ ಆದೇಶ ಮತ್ತು ಭಗವಂತನ ಸಂಕಲ್ಪದಂತೆ ಸನ್ಯಾಸ ಜೀವನವನ್ನು ಸ್ವೀಕರಿಸುವಂತಾಯಿತು. ಬದುಕಿನ ಪ್ರತಿಯೊಂದು ಪ್ರಮುಖ ಘಟನೆಯ ಹಿಂದೆಯೂ ದೈವಿಕ ಯೋಜನೆಯಿದೆ ಎಂಬುದು ತಮ್ಮ ಅನುಭವವಾಗಿದೆ ಎಂದು ಶ್ರೀಪಾದರು ಹೇಳಿದರು.
ಜನ್ಮನಕ್ಷತ್ರ ಆಚರಣೆಯು ವ್ಯಕ್ತಿಯನ್ನು ಹೊಗಳುವ ಅಥವಾ ವೈಯಕ್ತಿಕ ಪ್ರಚಾರದ ಕಾರ್ಯಕ್ರಮವಾಗಬಾರದು. ಕಳೆದ ಜೀವನವನ್ನು ಅವಲೋಕಿಸಿ, ಭಗವಂತ ಮತ್ತು ಗುರುಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ದೇಶ, ಧರ್ಮ ಮತ್ತು ಸಮಾಜಕ್ಕಾಗಿ ಇನ್ನಷ್ಟು ಸೇವೆ ಮಾಡುವ ಸಂಕಲ್ಪ ಕೈಗೊಳ್ಳುವ ಪವಿತ್ರ ಸಂದರ್ಭವಾಗಬೇಕು ಎಂದು ಕರೆ ನೀಡಿದರು.
ತಮ್ಮ ದೀಕ್ಷಾಗುರು ಶ್ರೀ ಸುಜ್ಞಾನೇಂದ್ರ ತೀರ್ಥರ ವಾತ್ಸಲ್ಯ ಮತ್ತು ಗುರು ಶ್ರೀ ವಿದ್ಯಾಮಾನ್ಯ ತೀರ್ಥರ ಮಾರ್ಗದರ್ಶನವನ್ನು ಸ್ಮರಿಸಿದ ಶ್ರೀಪಾದರು, ತಮ್ಮ ಎಲ್ಲ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳ ಹಿಂದೆ ಗುರುಪರಂಪರೆಯ ಅನುಗ್ರಹವೇ ಮೂಲಶಕ್ತಿಯಾಗಿದೆ ಎಂದರು. ಶ್ರೀ ವಾದಿರಾಜ ಗುರುಸಾರ್ವಭೌಮರ ಭಕ್ತಿ, ಜ್ಞಾನ, ವೈರಾಗ್ಯ ಮತ್ತು ಸೇವಾಮನೋಭಾವ ತಮ್ಮ ನಿರಂತರ ಆದರ್ಶವಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರಲ್ಲಿಯೂ ಒಂದೊಂದು ವಿಶೇಷ ಪ್ರತಿಭೆಯಿದೆ. ಬರವಣಿಗೆ, ಸಂಗೀತ, ಪ್ರವಚನ, ಸಂಘಟನೆ ಅಥವಾ ಸಮಾಜಸೇವೆ—ಯಾವುದೇ ಪ್ರತಿಭೆಯನ್ನು ವೈಯಕ್ತಿಕ ಕೀರ್ತಿಗಾಗಿ ಬಳಸದೆ, ಭಗವಂತನ ಸೇವೆ ಮತ್ತು ಲೋಕಕಲ್ಯಾಣಕ್ಕಾಗಿ ಸಮರ್ಪಿಸಬೇಕು. ಆರೋಗ್ಯವೆಂದರೆ ಕೇವಲ ಕಾಯಿಲೆಯಿಲ್ಲದಿರುವುದಲ್ಲ; ಮನಸ್ಸಿನ ನೆಮ್ಮದಿ, ಹೃದಯದ ಸಂತೋಷ ಮತ್ತು ಪರಸ್ಪರ ಪ್ರೀತಿ–ವಿಶ್ವಾಸದಿಂದ ಬದುಕುವುದೂ ನಿಜವಾದ ಆರೋಗ್ಯವಾಗಿದೆ ಎಂದು ಶ್ರೀಪಾದರು ಸಂದೇಶ ನೀಡಿದರು.
ಮಹೋತ್ಸವದ ಅಂಗವಾಗಿ ಜನ್ಮನಕ್ಷತ್ರ ಹೋಮ, ಸುದರ್ಶನ ಹೋಮ, ವಿರಜಾ ಹೋಮ ಹಾಗೂ ಶ್ರೀ ಉಪೇಂದ್ರ ವಿಠಲ ದೇವರಿಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನಡೆಯಿತು. ದೇಶ–ವಿದೇಶಗಳ ಶ್ರೀ ಪುತ್ತಿಗೆ ಮಠದ ಶಾಖೆಗಳಲ್ಲಿಯೂ ವಿಶೇಷ ಪೂಜೆ, ಹೋಮ–ಹವನ, ಭಜನೆ ಮತ್ತು ಅನ್ನಸಂತರ್ಪಣೆಗಳನ್ನು ಆಯೋಜಿಸಿ, ಶ್ರೀಪಾದರಿಗೆ ಆಯುರಾರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸುವಂತೆ ಪ್ರಾರ್ಥಿಸಲಾಯಿತು.
ಪ್ರಸಿದ್ಧ ವಿದ್ವಾಂಸ ಶ್ರೀ ಪಂಜ ಭಾಸ್ಕರ ಭಟ್ ಮತ್ತು ಮುಂಬೈನ ಶ್ರೀ ಪೇಜಾವರ ಮಠದ ಮುಖ್ಯಸ್ಥ ಶ್ರೀ ರಾಮದಾಸ ಉಪಾಧ್ಯಾಯರು ಅಭಿನಂದನಾ ಭಾಷಣ ಮಾಡಿ, ಶ್ರೀಪಾದರ ಸುದೀರ್ಘ ಸನ್ಯಾಸ ಜೀವನ, ನಾಲ್ಕು ಪರ್ಯಾಯಗಳ ಸಾಧನೆ ಮತ್ತು ವಿಶ್ವವ್ಯಾಪಿ ಶ್ರೀಕೃಷ್ಣ ಭಕ್ತಿಪ್ರಚಾರವನ್ನು ಕೊಂಡಾಡಿದರು.
ವಿವಿಧ ಕ್ಷೇತ್ರಗಳ ವಿದ್ವಾಂಸರು ಮತ್ತು ಸಮಾಜಸೇವಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಚಾತುರ್ಮಾಸ್ಯ ಸೇವಾ ಸಮಿತಿಯ ವತಿಯಿಂದ ಉದ್ಯಮಿ ಶ್ರೀ ಶಿವರಾಮ ಭಟ್, ಶ್ರೀ ಗೋಪಾಲ್ ಶೆಟ್ಟಿ ಹಾಗೂ ಸಮಿತಿಯ ಇತರ ಸದಸ್ಯರು ಪೂಜ್ಯ ಶ್ರೀಪಾದರಿಗೆ ಬೃಹತ್ ಕಿರೀಟ ಮತ್ತು ಹಾರವನ್ನು ಸಮರ್ಪಿಸಿ ಗೌರವಿಸಿದರು. ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶ್ರೀಪಾದರಿಗೆ ಗುರುನಮನ ಸಲ್ಲಿಸಲಾಯಿತು.



ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ, ಶ್ರೀ ರತೀಶ್ ತಂತ್ರಿ, ಶ್ರೀ ನಾರಾಯಣ ಆಚಾರ್ಯ, ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯ, ಶ್ರೀ ಎ. ಬಿ. ಕುಂಜಾರು ಸೇರಿದಂತೆ ವಿವಿಧ ಶಾಖಾಮಠಗಳ ಪ್ರಮುಖರು, ಮುಂಬೈ ಮಹಾನಗರದ ಭಕ್ತರು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀ ಗುರುಪ್ರಸಾದ್ ಗಂಟ್ಸೂರು ಸ್ವಾಗತಿಸಿದರು. ಶ್ರೀಮಠದ ಕಲಾ ಕಾರ್ಯದರ್ಶಿ ಶ್ರೀ ರಮಣಾಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಬಿ. ಆರ್. ಶೆಟ್ಟಿ ಧನ್ಯವಾದ ಸಲ್ಲಿಸಿದರು.
ಮಂತ್ರಾಕ್ಷತೆ, ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆಯೊಂದಿಗೆ ಶ್ರೀಪಾದರ 65ನೇ ಜನ್ಮನಕ್ಷತ್ರ ಮಹೋತ್ಸವವು ಸಂಭ್ರಮದಿಂದ
ಸಂಪನ್ನಗೊಂಡಿತು.







