ಮಣಿಪಾಲ: ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಕೆಳ ಶಾಂತಿನಗರದ ಸಾರ್ವಜನಿಕ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಿನಾಂಕ 16-09-2026ರಂದು ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ವಿವೇಕಾನಂದ ಅವರಿಗೆ ಕೆಳ ಶಾಂತಿನಗರದ ಸಾರ್ವಜನಿಕ ಹಾಡಿಯಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.
ಮಾಹಿತಿಯ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಸಾರ್ವಜನಿಕ ಹಾಡಿಯ ಮಧ್ಯದಲ್ಲಿ ಕುಳಿತು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದವರನ್ನು ಲಕ್ಷ್ಮಣ್ ಚಂದ್ರಪ್ಪ ಚೌದರಿ (43), ಶಂಕರ ಗೌಡ ಹೊಸಮನೆ (46), ಸುರೇಶ್ (32), ದಾನಪ್ಪ ರಾಠೋಡ್ (35), ಯಮುನಪ್ಪ ನಾಗರಾಳ (40) ಹಾಗೂ ಬರಮಪ್ಪ (51) ಎಂದು ಗುರುತಿಸಲಾಗಿದೆ. ಇವರಲ್ಲಿ ಬಹುತೇಕರು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳವರು ಎಂದು ತಿಳಿದುಬಂದಿದೆ.
ಆರೋಪಿಗಳಿಂದ ಜುಗಾರಿ ಆಟಕ್ಕೆ ಬಳಸಿದ್ದ ₹8,830 ನಗದು, ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಹಾಗೂ ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







